ಸಿರಗುಪ್ಪ: ಮಾಸ್ಕ್ ಧರಿಸದವರಿಗೆ ಹಾಗೂ ಪರಸ್ಪರ ಅಂತರ ಪಾಲಿಸುವಲ್ಲಿ ವಿಫಲರಾದ ವಿವಿಧ ಅಂಗಡಿ ಮಾಲೀಕರಿಗೆ ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ದಂಡ ವಿಧಿಸಲು ಮುಂದಾಗಿದ್ದು, ಸೋಮವಾರ ಒಂದೇ ದಿನ 3800 ರೂ. ವಸೂಲಿ ಮಾಡಿದೆ.
ಕರೊನಾ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವು ನಿಯಮಗಳನ್ನು ಜಾರಿಗೊಳಿಸುತ್ತಿದೆ. ಪ್ರತಿ ದಿನ ಅಧಿಕಾರಿಗಳು, ಸಂಘ-ಸಂಸ್ಥೆಗಳ, ಜನಪ್ರತಿನಿಧಿಗಳು ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಆದರೂ, ಸಾರ್ವಜನಿಕರು ತಿಳಿದೋ ತಿಳಿಯದೆಯೋ ನಿಯಮಗಳನ್ನು ಪಾಲಿಸದೆ ಓಡಾಡುತ್ತಿರುದರಿಂದ ತೆಕ್ಕಲಕೋಟೆ ಪಪಂ ದಂಡ ಪ್ರಯೋಗ ಮಾಡಿದೆ. ಮಾಸ್ಕ್ ಧರಿಸದವರಿಗೆ 100 ರೂ. ಮತ್ತು ಪರಸ್ಪರ ಅಂತರ ನಿಯಮ ಪಾಲಿಸದ ಅಂಗಡಿ ಮಾಲೀಕರಿಗೆ 100 ರೂ. ದಂಡ ವಿಧಿಸಲಾಗುತ್ತಿದೆ.
ಪಪಂ ಮುಖ್ಯಾಧಿಕಾರಿ ಕಂಪಳಮ್ಮ ಮಾತನಾಡಿ, ಪ್ರತಿ ದಿನ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರಿಗೆ ವಾಹನಗಳ ಮೂಲಕ ಮಾಸ್ಕ್ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಆದರೂ, ಬಹತೇಕರು ನಿಯಮ ಉಲ್ಲಂಘಿಸುತ್ತಿರುವುದರಿಂದ ದಂಡ ವಿಧಿಸಲಾಗುತ್ತಿದೆ. ಪೊಲೀಸರು ಹಾಗೂ ಪಪಂ ಸಿಬ್ಬಂದಿ ಸಹಕಾರದಿಂದ ಸೋಮವಾರ ಒಂದೇ ದಿನ 3800 ರೂ. ದಂಡ ಹಾಕಲಾಗಿದೆ ಎಂದು ತಿಳಿಸಿದರು. ಈ ವೇಳೆ ಪಿಎಸ್ಐ ತಿಮ್ಮಣ್ಣ ನಾಯಕ, ಪಪಂ ಸಿಬ್ಬಂದಿ ಹುಸೇನಿಬಾಷಾ, ಸುಬ್ರಹ್ಮಣಿ, ಶೋಭಾ ಇತರರಿದ್ದರು.