ಸಿರಿಗೇರಿ: ಅನಾರೋಗ್ಯ ಪೀಡಿತ ರಾಸುಗಳಿಗೆ ಉಚಿತ ಚಿಕಿತ್ಸೆ, ಹೈನುಗಾರಿಕೆಯಲ್ಲಿ ಲಾಭ ಪಡೆಯಲು ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೈ.ಗಂಗಾಧರ ಹೇಳಿದರು.
ಗ್ರಾಮದಲ್ಲಿ ಪಶು ಪಾಲನಾ ಇಲಾಖೆ, ಎಚ್ಡಿಎಫ್ಸಿ ಬ್ಯಾಂಕ್, ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ, ಮುದ್ದಟ್ಟನೂರು ಗ್ರಾಪಂ, ಬೈಫ್ ತಳಿ ಸಂವರ್ಧನ ಕೇಂದ್ರದ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಬರಡು ದನಗಳ ಉಚಿತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಪಶು ನಿರೀಕ್ಷಕ ದೇವೇಂದ್ರಪ್ಪ ಮಾತನಾಡಿ, ಬೆಳೆಗಳಿಗೆ ಸಾವಯವ ಗೊಬ್ಬರ ಬಳಸಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಅತಿಯಾದ ರಾಸಾಯನಿಕ ಬಳಸಿದರೆ ಹಸು ಹಾಗೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದರು.
ಬೈಫ್ ಸಂಸ್ಥೆಯ ಸಂಯೋಜಕ ವಿ.ಜಿ.ಕುಮಾರ್ಗೌಡ ಮಾತನಾಡಿದರು. ಕೃತಕ ಗರ್ಭಧಾರಣ ತಂತ್ರಜ್ಞರಾದ ಗಿರಿ ಮಲ್ಲನಗೌಡ, ಓಂಕಾರ ರೆಡ್ಡಿ, ಚಾಂದ್ ಬಾಷಾ ಹಾಗೂ ಗ್ರಾಪಂ ಸದಸ್ಯರಾದ ಭರತ್, ಹಂಪಮ್ಮ, ಮಾಜಿ ಸದಸ್ಯ ಬಸವನಗೌಡ, ಪಶು ಸಖಿಯಾದ ದೇವೀರಮ್ಮ ಇತರರಿದ್ದರು.