ಸಿರಿಗೇರಿ: ಪರೀಕ್ಷೆಗಾಗಿ ಓದದೆ ಜ್ಞಾನಾರ್ಜೆಗಾಗಿ ಅಭ್ಯಾಸ ಮಾಡಬೇಕು. ಪ್ರೌಢ ಹಂತದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಖ್ಯ ಘಟ್ಟವಾಗಿರುತ್ತದೆ. ಸಮಯ ವ್ಯರ್ಥ ಮಾಡದೆ ನಿಗದಿತ ಅವಧಿಯಲ್ಲಿ ವಿಷಯಗಳನ್ನು ಪೂರ್ಣಗೊಳಿಸಬೇಕು. ಭಯ ಪಡದೆ ಚೆನ್ನಾಗಿ ಅಭ್ಯಾಸ ಮಾಡಿದರೆ ಉತ್ತಮ ಅಂಕಗಳಿಸಬಹುದು ಎಂದು ಆಂಗ್ಲ ಭಾಷಾ ವಿಷಯ ಸಂಪನ್ಮೂಲ ವ್ಯಕ್ತಿ, ಶಿಕ್ಷಕ ಎನ್.ನಾಗರಾಜ್ ತಿಳಿಸಿದರು.
ಇಲ್ಲಿನ ಬಾಲಕರು ಹಾಗೂ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಆಂಗ್ಲ ವಿಷಯದ ಕಾರ್ಯಾಗಾರದಲ್ಲಿ ಶನಿವಾರ ಮಾತನಾಡಿದರು. ವ್ಯಾಕರಣ ಅರ್ಥೈಸಿಕೊಂಡು ಉತ್ತರ ಬರೆಯಬೇಕು. ಓದಿದ ವಿಷಯವಾರು ಟಿಪ್ಪಣಿ ಮಾಡಿಕೊಂಡು ಎತ್ತಿಟ್ಟುಕೊಂಡು ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಓದಿಕೊಳ್ಳಿ ಎಂದು ಸಲಹೆ ನೀಡಿದರು.
ಬಾಲಕರ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ವೀರಪ್ಪ ಮಾತನಾಡಿ, ಶಿಕ್ಷಕ ಎನ್.ನಾಗರಾಜ್ ಅವರು ಪಾಸಿಂಗ್ ಮತ್ತು ಅತಿ ಹೆಚ್ಚು ಅಂಕಗಳಿಸುವ ಸುಲಭ ಮಾರ್ಗಗಳನ್ನು ತಿಳಿಸಿಕೊಟ್ಟಿದ್ದು, ವಿದ್ಯಾರ್ಥಿಗಳು ಅನುಸರಿಸಬೇಕು ಎಂದರು. ಶಿಕ್ಷಕರಾದ ಜ್ಯೋತಿ ಪಿ.ಎನ್., ಮಹ್ಮದ್ ಕಾಸಿಂ, ಪಿ.ವೆಂಕಟೇಶ್, ಅನ್ನೀವೇಲು, ವಿಶಾಲಮ್ಮ, ಕಲ್ಗುಡಿ ಮಂಜುನಾಥ್ ಇದ್ದರು.