ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಪದಕ ಜಯಿಸಿದ ಭಾರತೀಯ ಕ್ರೀಡಾಪಟುಗಳಿಗೆ ಭರ್ಜರಿ ಬಹುಮಾನ ಮೊತ್ತ ಹರಿದು ಬರುತ್ತಿದೆ. ಇದರ ನಡುವೆ ಅದೇ ಹೆಸರು ಹೊಂದಿರುವವವಿರಿಗೂ ಅದೃಷ್ಟ ಖುಲಾಯಿಸಿದೆ. ನೀರಜ್, ಸಿಂಧು, ಶ್ರೀಜೇಶ್ ಹೆಸರು ಹೊಂದಿರುವವರಿಗೆ ದೇಶದ ವಿವಿಧೆಡೆ ಹಲವು ರೀತಿಯ ವಿಶೇಷ ಆಫರ್ಗಳು ಒಲಿದು ಬಂದಿವೆ. ಈ ಆಫರ್ಗಳ ಲಾಭ ಪಡೆದುಕೊಳ್ಳುವವರಿಗೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ವೋಟರ್ ಕಾರ್ಡ್ ತೋರಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ.
ಪೆಟ್ರೋಲ್ ಉಚಿತ
ನೀರಜ್ ಚೋಪ್ರಾ ಮತ್ತು ಪಿವಿ ಸಿಂಧು ಪದಕ ಸಾಧನೆಯ ಗೌರವಾರ್ಥ ಗುಜರಾತ್ ಮತ್ತು ತಮಿಳುನಾಡಿನಲ್ಲಿ ‘ನೀರಜ್’ ಮತ್ತು ‘ಸಿಂಧು’ ಹೆಸರಿನವರಿಗೆ ಉಚಿತ ಪೆಟ್ರೋಲ್ ವಿತರಿಸಲಾಗಿದೆ. ಗುಜರಾತ್ನ ಭರುಚ್ ಜಿಲ್ಲೆಯ ಪೆಟ್ರೋಲ್ ಬಂಕ್ನಲ್ಲಿ ‘ನೀರಜ್’ ಹೆಸರಿನವರಿಗೆ 501 ರೂ. ಬೆಲೆಯ ಉಚಿತ ಪೆಟ್ರೋಲ್ ವಿತರಿಸಲಾಗುತ್ತಿದ್ದು, 30ಕ್ಕೂ ಅಧಿಕ ಮಂದಿ ಇದರ ಲಾಭ ಪಡೆದುಕೊಂಡಿದ್ದಾರೆ. ತಮಿಳುನಾಡಿನ ತಿರುಮನಿಲೈಯುರ್ನಲ್ಲಿ ನೀರಜ್ ಮತ್ತು ಸಿಂಧು ಹೆಸರಿನವರಿಗೆ ಕ್ರಮವಾಗಿ 2 ಮತ್ತು 1 ಲೀಟರ್ ಉಚಿತ ಪೆಟ್ರೋಲ್ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ‘ನೀರಜ್’ ಹೆಸರು ಅಪರೂಪವಗಿರುವುದರಿಂದ ಮೂವರಷ್ಟೇ ಇದರ ಲಾಭ ಪಡೆದಿದ್ದರೆ, ಸಿಂಧು ಹೆಸರಿನವರು ಹೆಚ್ಚಿನ ಸಂಖ್ಯೆಯಲ್ಲಿ ಈ ಆರ್ ಬಳಸಿಕೊಂಡಿದ್ದಾರೆ. ಕೊಚ್ಚಿಯಲ್ಲಿ ಶ್ರೀಜೇಶ್ ಹೆಸರಿನವರು ಆಧಾರ್ ಕಾರ್ಡ್ ತೋರಿಸಿ, ಆಗಸ್ಟ್ 31ರವರೆಗೆ ಪ್ರತಿ ವಾರ 101 ರೂ. ಪೆಟ್ರೋಲ್ ಉಚಿತವಾಗಿ ತಮ್ಮ ವಾಹನಕ್ಕೆ ಹಾಕಿಸಿಕೊಳ್ಳುವ ಆರ್ಅನ್ನು ಬಂಕ್ ಒಂದರ ಮಾಲೀಕರು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಕನ್ನಡತಿ ಅದಿತಿಗೆ ಒಲಿಂಪಿಕ್ಸ್ ಪದಕ ಕೈತಪ್ಪಿದರೂ ಒಲಿದು ಬಂತು ಭರ್ಜರಿ ಬಹುಮಾನ!
ಬಟ್ಟೆ ಶಾಪಿಂಗ್ ಚಾನ್ಸ್
ಒಲಿಂಪಿಕ್ಸ್ನಲ್ಲಿ 41 ವರ್ಷಗಳ ಬಳಿಕ ಪದಕ ಸಾಧನೆ ತೋರಿದ ಭಾರತ ಹಾಕಿ ತಂಡದ ಗೆಲುವಿನ ರೂವಾರಿ ಗೋಲು ಕೀಪರ್ ಪಿಆರ್ ಶ್ರೀಜೇಶ್ ಅವರ ತವರೂರು ಕೇರಳದಲ್ಲಿ ಅವರ ಹೆಸರಿನವರಿಗೆ ಉಚಿತ ಬಟ್ಟೆ ಶಾಪಿಂಗ್ ಆಫರ್ ನೀಡಲಾಗಿದೆ. ಕೊಚ್ಚಿಯಿಂದ 45 ನಿಮಿಷ ದೂರದ ಚೆರ್ತಲಾದಲ್ಲಿ ‘ಕೆಎಲ್-32 ಜೆಂಟ್ಸ್ ವೇರ್’ ಮಳಿಗೆಯ ಮಾಲೀಕರು, ‘ಶ್ರೀಜೇಶ್’ ಹೆಸರಿನವರಿಗೆ ತಮ್ಮ ಆಯ್ಕೆಯ ಶರ್ಟ್ ಒಂದನ್ನು ಉಚಿತವಾಗಿ ಪಡೆಯುವ ಆಫರ್ ನೀಡಿದ್ದಾರೆ. ಶ್ರೀಜೇಶ್ ಹೆಸರಿನ 15ಕ್ಕೂ ಹೆಚ್ಚು ಮಂದಿ ಈ ಆಫರ್ಅನ್ನು ಬಳಸಿಕೊಂಡಿದ್ದಾರೆ ಕೂಡ. ಚೆರ್ತಲಾ ಮುನ್ಸಿಪಾಲಿಟಿ ಪ್ರದೇಶದವರಿಗೆ ಮಾತ್ರ ಈ ಆಫರ್ ಅನ್ವಯ ಎಂಬ ಷರತ್ತನ್ನು ಈಗ ಅಂಗಡಿ ಮಾಲೀಕರು ವಿಧಿಸಿದ್ದಾರೆ.
ಫ್ರೀ ರೋಪ್ವೇ ರೈಡ್
ಉತ್ತರಾಖಂಡದ ಹರಿದ್ವಾರದಲ್ಲಿ ನೀರಜ್ ಚೋಪ್ರಾ ಮತ್ತು ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ಗೌರವಾರ್ಥ ‘ನೀರಜ್’ ಮತ್ತು ‘ವಂದನಾ’ ಹೆಸರಿನ ಪ್ರವಾಸಿಗರಿಗೆ ಉಚಿತ ರೋಪ್ವೇ ರೈಡ್ ನೀಡಲಾಗುತ್ತಿದೆ. ಆಗಸ್ಟ್ 20ರವರೆಗೂ ಈ ಆರ್ ಜಾರಿಯಲ್ಲಿರುತ್ತದೆ. ಹರಿದ್ವಾರದ ಚಂಡಿದೇವಿ ದೇವಸ್ಥಾನಕ್ಕೆ ಹೋಗುವ ವೇಳೆ ಈ ರೋಪ್ವೇ 5 ನಿಮಿಷದ ದಾರಿ ಹೊಂದಿದ್ದು, 250 ರೂ. ಟಿಕೆಟ್ ಹೊಂದಿದೆ. ವಂದನಾ ಉತ್ತರಾಖಂಡ ರಾಜ್ಯದ ಆಟಗಾರ್ತಿಯಾಗಿರುವುದರಿಂದ ಅವರ ಹೆಸರಿನಲ್ಲೂ ಈ ಆಫರ್ ನೀಡಲಾಗುತ್ತಿದೆ.
ಉಚಿತ ಆಹಾರ ವಿತರಣೆ
ಸ್ವರ್ಣ ಸಾಧಕ ನೀರಜ್ ಚೋಪ್ರಾ ಅವರ ಸಾಧನೆಯನ್ನು ಸಂಭ್ರಮಿಸುವ ಸಲುವಾಗಿ ದೆಹಲಿಯಲ್ಲಿ ‘ನೀರಜ್’ ಹೆಸರಿನವರಿಗೆ ಶುಕ್ರವಾರದವರೆಗೆ ಉಚಿತ ಆಹಾರ ವಿತರಿಸಲಾಗಿದೆ. ದೆಹಲಿಯ ಜನಪ್ರಿಯ ಸೀತಾರಾಮ್ ದಿವಾನ್ಚಂದ್ ಶಾಪ್ನಲ್ಲಿ ನೀರಜ್ ಹೆಸರಿನವರಿಗೆ ಉಚಿತವಾಗಿ ಚೋಲೆ ಭಚುರೆ ನೀಡಲಾಗಿದೆ. ಉತ್ತರ ಭಾರತದವರು ಹೆಚ್ಚಾಗಿ ಇಷ್ಟಪಡುವ ಈ ಆಹಾರ, ನೀರಜ್ಗೂ ಪ್ರಿಯವಾದುದು ಎನ್ನಲಾಗಿದೆ.