ಸಿಂಧನೂರು: ಹೆಣ್ಣುಮಕ್ಕಳು ತಮ್ಮ ಸಂಕಟಗಳನ್ನು ತಾವೇ ಕಟ್ಟಿಕೊಳ್ಳುವುದು ಗಟ್ಟಿಯಾದ ಸಾಹಿತ್ಯ ಎಂದು ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಆಂಜನೇಯ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಮತ್ತು ಸಾಹಿತ್ಯ ಸ್ಪಂದನ ಬಳಗದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಪಿ.ಲಂಕೇಶ್ ಅವರ ಜನ್ಮದಿನ ಅಂಗವಾಗಿ ಸಾಹಿತ್ಯ ಮತ್ತು ಸ್ತ್ರೀ ಸಂವೇದನೆ ಕುರಿತು ಉಪನ್ಯಾಸ ನೀಡಿ ಶನಿವಾರ ಮಾತನಾಡಿದರು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸ್ತ್ರೀ ಸಂವೇದನೆಯ ಕುರಿತು 12ನೇ ಶತಮಾನದ ವಚನ ಸಾಹಿತ್ಯದಲ್ಲಿ ಚರ್ಚೆಗೆ ಅವಕಾಶ ನೀಡಲಾಗಿತ್ತು. ಮನು ಸ್ತ್ರೀಯರನ್ನು ಗೌರವಿಸುತ್ತಾ ಮುಕ್ತ ಸ್ವಾತಂತ್ರ್ಯ ಕೊಡುಬಾರದು ಎಂದು ಹೇಳಿದ್ದು ದ್ವಂದ್ವವಾಗಿದೆ ಎಂದು ಆಂಜನೇಯ ಹೇಳಿದರು.