ಸಿಂಧನೂರು: ಉತ್ತಮ ಆರೋಗ್ಯಕ್ಕೆ ಯೋಗ ಹಾಗೂ ಪ್ರಾಣಾಯಾಮ ಅಗತ್ಯವಾಗಿದ್ದು, ಈ ಮೂಲಕ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವೆಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಹೇಳಿದರು.
ನಗರದ ಸತ್ಯಗಾರ್ಡನ್ನಲ್ಲಿ ವಿಜಯವಾಣಿ, ದಿಗ್ವಿಜಯ ನ್ಯೂಸ್, ಪತಂಜಲಿ ಯೋಗ ಸಮಿತಿ, ಕೊಲ್ಲಾ ಶುಭಾರಾಣಿ ನಾಗವರ್ಧಿನಿ ಟ್ರಸ್ಟ್, ಬಸನಗೌಡ ಬಾದರ್ಲಿ ಫೌಂಡೇಷನ್, ಪಾಟೀಲ್ ಅಕಾಡೆಮಿ, ಭಾರತ ಸ್ಕೌಟ್ಸ್-ಗೈಡ್ಸ್, ರುದ್ರಗೌಡ ಪಾಟೀಲ್ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು. ಒತ್ತಡದ ಜೀವನ, ಸಂಸ್ಕರಿಸಿದ ಪದಾರ್ಥಗಳಿಗೆ ಮಾರು ಹೋಗಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಯೋಗವಿಲ್ಲದೆ ಬರೀ ಭೋಗದ ಜೀವನ ನಡೆಸಿದರೆ ಆಪತ್ತು ಖಂಡಿತ ಬರುತ್ತದೆ. ನಿತ್ಯದ ಜೀವನದಲ್ಲಿ ಸರಳ ಯೋಗದ ಕ್ರಮ, ವ್ಯಾಯಾಮಗಳನ್ನು ಮಾಡುವ ಮೂಲಕ ಆಯಸ್ಸು ಹೆಚ್ಚಿಸಿಕೊಳ್ಳಬೇಕೆಂದರು.
ಜಿಪಂ ಸದಸ್ಯ ಎನ್.ಶಿವನಗೌಡ ಗೊರೇಬಾಳ ಮಾತನಾಡಿ, ನಾನಾ ಕಾಯಿಲೆಗಳಿಂದ ಬಳಲುತ್ತಿರುವವರು ಯೋಗದ ಜತೆಗೆ ಪೌಷ್ಟಿಕ ಆಹಾರದಿಂದ ಪರಿಹಾರ ಕಂಡುಕೊಂಡಿದ್ದಾರೆ. ಹಸನ್ಮುಖಿಯಾಗಿರಲು ಯಾವುದೇ ಔಷಧ ಬೇಕಿಲ್ಲ. ನಿತ್ಯದ ಜೀವನದಲ್ಲಿ ಯೋಗ ಮಾಡಬೇಕೆಂದರು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಧ್ವರಾಜ ಆಚಾರ್ಯ ಮಾತನಾಡಿ, ಉತ್ತಮ ಬದುಕಿಗೆ ಯೋಗ ಅತ್ಯಗತ್ಯ. ಪ್ರತಿದಿನವು ನಿಯಮಿತ ಯೋಗ ಮಾಡುವುದರಿಂದ ಮನಸಿನ ಹಾಗೂ ದೇಹದ ಆರೋಗ್ಯ ಉತ್ತಮ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಯೋಗಗುರು ಎಂ.ಭಾಸ್ಕರ್, ಸೂರ್ಯ ನಮಸ್ಕಾರ ಹಾಗೂ ಇತರ ಆಸನಗಳನ್ನು ಪ್ರದರ್ಶಿಸಿದರು. ಪುರಸಭೆ ಮಾಜಿ ಸದಸ್ಯೆ ಜಿ. ದೇವಿರಮ್ಮ, ಪ್ರಮುಖರಾದ ಬಸಪ್ಪ ತಾಳಿಕೋಟೆ, ಮೂರ್ತಿ ಚನ್ನಳ್ಳಿ, ಗೀತಾ ಎಂ.ಭಾಸ್ಕರ್, ವೆಂಕನಗೌಡ ವಟಗಲ್, ಪ್ರಸಾದ, ಯೋಗಸಾಧಕ ಬೀರಪ್ಪ ಶಂಭೋಜಿ ಹಾಗೂ ಇತರರಿದ್ದರು.