ಸಿಂಧನೂರು: ಸರ್ಕಾರ ನಿಗದಿಪಡಿಸಿರುವ ಜೋಳ ಖರೀದಿ ಪ್ರಮಾಣ ಸರಿಯಲ್ಲ. ಖರೀದಿ ಕೇಂದ್ರದ ಮೂಲಕವೇ ಬೆಂಬಲ ಬೆಲೆಯಲ್ಲಿ ರೈತರ ಎಲ್ಲ ಜೋಳ ಖರೀದಿಸುವಂತೆ ಆಹಾರ ಇಲಾಖೆ ಸಚಿವಗೆ ಒತ್ತಡ ಹಾಕಲಾಗುವುದು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಒಂದು ಲಕ್ಷ ರೈತರು ಜೋಳ ಬೆಳೆದಿದ್ದಾರೆ. ಕೇಂದ್ರದಲ್ಲಿ ಒಬ್ಬ ರೈತನಿಂದ ಕೇವಲ 20 ಕ್ವಿಂಟಲ್ ಖರೀದಿ ಸರಿಯಲ್ಲ. ಜ.19ರಂದು ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಆಹಾರ ಬೆಳೆಗಳ ಬಗ್ಗೆ ಸಭೆ ನಡೆಯಲಿದ್ದು, ಎಲ್ಲ ಜೋಳ ಖರೀದಿಸುವಂತೆ ಒತ್ತಾಯಿಸುತ್ತೇವೆ. ಜಿಲ್ಲೆಯಲ್ಲಿ 120 ಪ್ರಾಥಮಿಕ ಸಹಕಾರಿ ಸಂಘಗಳಿದ್ದು, ಇವುಗಳಿಂದ ಬೆಂಬಲ ಬೆಲೆಯಲ್ಲಿ ಜೋಳ ಖರೀದಿಸಲು ಕ್ರಮಕೈಗೊಳ್ಳಬೇಕು ಎಂದರು. ತಾಲೂಕಿನಲ್ಲಿ ತಾಯಿ-ಮಕ್ಕಳ ಆಸ್ಪತ್ರೆಯನ್ನು ಶಾಸಕರು ಏಳು ಕಿಮೀ ದೂರದಲ್ಲಿ ನಿರ್ಮಿಸಲು ಮುಂದಾಗಿದ್ದು ಅವೈಜ್ಞಾನಿಕ. ನಗರ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆ ಸೇರಿ ಎರಡ್ಮೂರು ಕಡೆಗಳಲ್ಲಿ ಸರ್ಕಾರಿ ಸ್ವಾಮ್ಯದ ಜಾಗ ಇದೆ. ಜನರಿಗೆ ಅನುಕೂಲವಾದ ಸ್ಥಳದಲ್ಲಿ ಆಸ್ಪತ್ರೆ ನಿರ್ಮಿಸುವುದು ಶಾಸಕರ ಕರ್ತವ್ಯವಾಗಲಿ ಎಂದರು.
ಎಂಎಲ್ಸಿ ಶರಣೇಗೌಡ ಬಯ್ಯಪುರ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಇತರರಿದ್ದರು.