ಸಿಂಧನೂರು: ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಘಟಕ ನಗರದ ತಾಲೂಕು ಆಡಳಿತ ಸೌಧ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿತು.
ಕಟ್ಟಡ ಸಾಮಗ್ರಿಗಳ ಬೆಲೆ ಇಳಿಸಿ ಕಟ್ಟಡ ನಿರ್ಮಾಣ ಉದ್ಯಮ ರಕ್ಷಿಸಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರ ಕಾನೂನು 1996 ಹಾಗೂ ಸೀಸ್ ಕಾನೂನನ್ನು ಮರು ಸ್ಥಾಪಿಸಬೇಕು. ಕಟ್ಟಡ ಕಾರ್ಮಿಕರಿಗೆ 5 ಲಕ್ಷ ರೂ. ಮನೆ ನಿರ್ಮಾಣಕ್ಕೆ ಸಹಾಯಧನ ನೀಡಬೇಕು. ಸಹಜ ಮರಣ ಪರಿಹಾರ ಮೊತ್ತವನ್ನು 5 ಲಕ್ಷ ರೂ. ಹಾಗೂ ಅಪಘಾತ ಮರಣ ಪರಿಹಾರವನ್ನು 10 ಲಕ್ಷ ರೂ.ಗೆ ಹೆಚ್ಚಿಸಬೇಕು.
ಕಾರ್ಮಿಕರ ನೋಂದಣಿ ಮತ್ತು ಸೌಲಭ್ಯ ಪಡೆಯಲು ತೊಂದರೆಯಾಗದಂತೆ ಸಾಫ್ಟ್ವೇರ್ ಬದಲಾಯಿಸುವುದನ್ನು ನಿಲ್ಲಿಸಬೇಕು. ಕರೊನಾ ಸೋಂಕಿನಿಂದ ಮರಣ ಹೊಂದಿದ ಕಾರ್ಮಿಕರ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು. ಅರ್ಹ ಕಟ್ಟಡ ಕಾರ್ಮಿಕರಿಗೆ ಕಿಟ್ ಬದಲಾಗಿ ನೇರ ನಗದು ಹಣ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಶೇಕ್ಷಾಖಾದ್ರಿ, ಪದಾಧಿಕಾರಿಗಳಾದ ಎಂ.ಮುನಿಸ್ವಾಮಿ, ವೆಂಕಟೇಶ ಭೋವಿ, ಯಂಕಪ್ಪ, ಪಿ.ವೆಂಕಟರಾಜು, ಚಾಂದ್ಪಾಷಾ, ಇಸ್ಮಾಯಿಲ್, ಮಂಜುನಾಥ, ಚಂದ್ರಶೇಖರ ಇದ್ದರು.