ಸಿಂಧನೂರು: ನಗರಕ್ಕೆ ಕುಡಿವ ನೀರು ಪೂರೈಕೆಯಾಗುವ ಕೆರೆ ಕುಸಿದಿದ್ದು ದುರಸ್ತಿಗೆ ತುರ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿ ಚೀಪ್ ಇಂಜಿನಿಯರ್ ರಾಜಗೋಪಾಲ ತಿಳಿಸಿದರು.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಕೆರೆಯನ್ನು ಮಂಗಳವಾರ ವೀಕ್ಷಿಸಿ, ಸುದ್ದಿಗಾರೊಂದಿಗೆ ಮಾತನಾಡಿದರು. 1998ರಲ್ಲಿ ಕುಡಿವ ನೀರಿನ ಕೆರೆ ನಿರ್ಮಾಣವಾಗಿದೆ. ಆ ಸಂದರ್ಭದಲ್ಲಿ ಕೆರೆಯ ಬಂಡ್ಅನ್ನು ಇಳಿಜಾರಿನಲ್ಲಿ ಮಾಡಿಲ್ಲ. ಎತ್ತರದಲ್ಲಿ ನಿರ್ಮಾಣ ಮಾಡಿದ್ದರಿಂದ ಈಗಾಗಲೇ ಮೂರು ಬಾರಿ ಸಣ್ಣ ಪ್ರಮಾಣದಲ್ಲಿ ಕುಸಿತ ಕಂಡಿದೆ. 1 ಅಡಿ ಎತ್ತರ ಇದ್ದರೆ, 1.5 ಅಡಿ ಇಳಿಜಾರಿರಬೇಕು. ಈಗ ಎರಡು ಕಡೆಗಳಲ್ಲಿ ಬಂಡ್ ಸರಿದಿದ್ದರು ಕೂಡಲೇ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು. ಸುತ್ತಲೂ ಕೆರೆಯ ಬಂಡ್ ನಿರ್ಮಾಣಕ್ಕೆ ಎಸ್ಟಿಮೇಟ್ ತಯಾರಿಸಲಾಗುವುದು. ತಾತ್ಕಾಲಿಕ ದುರಸ್ತಿ ತಿಂಗಳಲ್ಲಿ ಮುಗಿಯಲಿದೆ. ಆತಂಕಪಡುವ ಅಗತ್ಯವಿಲ್ಲ ಎಂದರು.
ತಜ್ಞರನ್ನು ಕರೆಸಲಾಗಿದ್ದು, ಈಗ ಕುಸಿತಗೊಂಡ ಸ್ಥಳ ಹಾಗೂ ಕೆರೆಯ ಗುಣಮಟ್ಟದ ಬಗ್ಗೆ ಪರಿಶೀಲಿಸಿ ವರದಿ ನೀಡಲಿದ್ದು, ವರದಿಯಾಧರಿಸಿ ದುರಸ್ತಿಗೆ ತಗಲುವ ವೆಚ್ಚದ ವರದಿ ತಯಾರಿಸಲಾಗುವುದು. ಈಗ 4 ಎಂಜಿ ನೀರು ಸಂಗ್ರಹ ಇದ್ದು ನಿತ್ಯ ನೀರು ಪೂರೈಕೆಯಾದಂತೆ ನೀರು ಖಾಲಿಯಾದ ನಂತರ ದುರಸ್ತಿ ಕಾರ್ಯಕ್ಕೆ ಕೈಗೊಳ್ಳಲಾಗುವುದು ಎಂದರು.
ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, 2008 ಹಾಗೂ ನಾನು ಸಚಿವನಾಗಿದ್ದ 2019 ರಲ್ಲಿ ಕೆರೆ ಕುಸಿತಗೊಂಡಿತ್ತು. ತಾತ್ಕಾಲಿಕ ದುರಸ್ತಿ ಮಾಡಿಸಲಾಗಿತ್ತು. ಈಗ ಕೆರೆ ಮತ್ತೇ ಕುಸಿತಗೊಂಡಿದ್ದರಿಂದ ತಜ್ಞರು ಹಾಗೂ ಇಂಜಿನಿಯರ್ಗಳನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ. ಕೆರೆ ದುರಸ್ತಿ ಶೀಘ್ರವೇ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಮುಂದೆ ಈ ರೀತಿಯಲ್ಲಿ ಕೆರೆ ಕುಸಿತಗೊಳ್ಳದಂತೆ ದುರಸ್ತಿಗೊಳಿಸಲು ಅಂದಾಜು ವೆಚ್ಚ ತಯಾರಿಸಲು ಇಂಜನಿಯರ್ಗಳಿಗೆ ತಿಳಿಸಲಾಗಿ ಎಂದರು.
ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ಸಿಂಧನೂರಿನ ಜನತೆ ಆತಂಕಗೊಳ್ಳುವ ಅಗತ್ಯವಿಲ್ಲ. ಆರು ದಿನ ಬಿಟ್ಟು ಏಳನೇ ದಿನಕ್ಕೆ ನೀರು ಪೂರೈಕೆ ಮಾಡಲಾಗುವುದು ಎಂದರು.
ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿ ಎಇಇ ಸಿ.ಎಚ್.ಚೌಹ್ಹಾಣ, ಎಇ ಯೂನಿಸ್ಪಾಷಾ, ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ, ಪೌರಾಯುಕ್ತ ವಿರೂಪಾಕ್ಷಮೂರ್ತಿ, ಸದಸ್ಯರಾದ ಶೇಖರಪ್ಪ ಗಿಣಿವಾರ, ಸತ್ಯನಾರಾಯಣ, ಚಂದ್ರಶೇಖರ ಮೈಲಾರ, ಶರಣಪ್ಪ ಉಪ್ಪಲದೊಡ್ಡಿ, ಕೆ.ಹನುಮೇಶ, ಚಂದ್ರಶೇಖರ ಮೈಲಾರ, ಛತ್ರಪ್ಪ ಕುರುಕುಂದಿ, ಪ್ರಭುರಾಜ, ಚಂದ್ರಶೇಖರ ಮೇಟಿ, ಅಶೋಕಗೌಡ ಗದ್ರಟಗಿ, ನಗರಸಭೆಯ ಪ್ರವೀಣ ಸಾಗರ ಇತರರು ಇದ್ದರು. ನ. 22 ರಂದು ವಿಜಯವಾಣಿ ಪತ್ರಿಕೆಯಲ್ಲಿ ಕೆರೆ ಕುಸಿತಗೊಂಡ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.