ಸಿಂದಗಿ: ಎಸ್.ಎಸ್.ಮಲ್ಲೇದ ಗುರುಗಳು ಸ್ನೇಹಜೀವಿಯಾಗಿದ್ದು, ಅವರಿಗಾಗಿ ನಡೆದಿರುವ ಷಷ್ಠಿಪೂರ್ತಿ ಮತ್ತು ಗುರುವಂದನಾ ಸಮಾರಂಭ ಭಾರತದ ಸಂಸ್ಕೃತಿಯನ್ನು ನೆನಪಿಸುತ್ತದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್.ಎಸ್.ಮಲ್ಲೇದ ಗುರುಗಳ ಷಷ್ಠಿಪೂರ್ತಿ, ಗುರುವಂದನಾ ಸಮಾರಂಭ, ದೈಹಿಕ ಶಿಕ್ಷಣ ಸಾಹಿತ್ಯ ಸಂಪದ ಗ್ರಂಥ ಬಿಡುಗಡೆ ಹಾಗೂ ತುಲಾಭಾರ ಸಮಾರಂಭದ ಮುಖ್ಯಅತಿಥಿಯಾಗಿ ಮಾತನಾಡಿದರು.
36 ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದ ಕೀರ್ತಿ ಮಲ್ಲೇದ ಗುರುಗಳಿಗೆ ಸಲ್ಲುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಅಧ್ಯಕ್ಷತೆ ವಹಿಸಿ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂದರ್ಭ ಎಲ್ಲ ವಿಷಯಗಳಿಗೆ ಆದ್ಯತೆ ಕೊಟ್ಟ ಹಾಗೆ ದೈಹಿಕ ಶಿಕ್ಷಣಕ್ಕೂ ಮಾನ್ಯತೆ ನೀಡಲಾಗುವುದು. ನಾನು ಎರಡು ಬಾರಿ ವಿಧಾನ ಪರಿಷತ್ ಚುನಾವಣೆ ಗೆಲ್ಲುವಲ್ಲಿ ನನ್ನ ಜತೆ ನಿಂತವರು ಎಸ್.ಎಸ್.ಮಲ್ಲೇದ ಗುರುಗಳು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಸಾಹಿತ್ಯ ಸಂಪದ ಗ್ರಂಥ ಬಿಡುಗಡೆಗೊಳಿಸಿ, ಎಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿಗೆ ಅಪಾರ ಗೌರವವಿದೆ. ತಂದೆ-ತಾಯಿ ಜನ್ಮನೀಡಿದರೆ ಗುರು ಸಂಸ್ಕಾರ ನೀಡುತ್ತಾನೆ. ಅದಕ್ಕಾಗಿ ಗುರುವಿಗೆ ಹೆಚ್ಚು ಗೌರವವಿದೆ ಎಂದರು.
ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು.
ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಕನ್ನೊಳ್ಳಿಯ ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಮೇಶ ಬಿರಾದಾರ ರಚಿಸಿದ ದೈಹಿಕ ಶಿಕ್ಷಣ ಸಾಹಿತ್ಯ ಸಂಪದ ಗ್ರಂಥವನ್ನು ಎಂಎಲ್ಸಿ ಹಣಮಂತ ನಿರಾಣಿ ಲೋಕಾರ್ಪಣೆ ಮಾಡಿದರು.
ಶಿಕ್ಷಕ ಎಸ್.ಎಸ್.ಮಲ್ಲೇದ ಅವರಿಗೆ ಗಣ್ಯಾತಿಗಣ್ಯರು ಕಲ್ಲುಸಕ್ಕರೆಯಿಂದ ತುಲಾಭಾರ ಮಾಡಿದರು. ಶಿಕ್ಷಕ ಎಸ್.ಎಸ್.ಮಲ್ಲೇದ, ಅವರ ಪತ್ನಿ ಸುಜಾತಾ ಮಲ್ಲೇದ, ಪುರಸಭೆ ಉಪಾಧ್ಯಕ್ಷ ಹಾಸಿಂಪೀರ್ ಆಳಂದ, ಬಾಗಲಕೋಟೆ ಡಿಡಿಪಿಐ ಎಸ್.ಎಸ್.ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಗನೂರ, ಬಿಆರ್ಸಿ ಸಂತೋಷಕುಮಾರ ಬೀಳಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎಂ. ಬಿರಾದಾರ, ನಿವೃತ್ತ ಉಪನಿರ್ದೇಶಕ ಟಿ.ಎಚ್.ಮೇಲಿನಕೇರಿ, ಬೆಂಗಳೂರಿನ ಸುರಭಿ ೌಂಡೇಷನ್ ನಿರ್ದೇಶಕ ಡಾ.ಎ.ಎಸ್.ಪಾಟೀಲ, ನಿವೃತ್ತ ದೈಹಿಕ ನಿರ್ದೇಶಕ ಕೆ.ಎಚ್.ಸೋಮಾಪುರ, ವರ್ತಕ ಬಸವರಾಜ ಅಂಬಲಗಿ, ಎ.ಬಿ.ಕವಲಗಿ ಸೇರಿದಂತೆ ಗಣ್ಯರು ವೇದಿಕೆ ಮೇಲಿದ್ದರು.
ಎಸ್.ಬಿ.ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಸಂಗಮೇಶ ಮಲ್ಲೇದ ಸ್ವಾಗತಿಸಿದರು. ಜಗದೀಶ ಪಾಟೀಲ ನಿರೂಪಿಸಿ ವಂದಿಸಿದರು.