ಕುಂದಗೋಳ: ಜೈನ ಮುನಿ ಕಾಮಕುಮಾರ ಮಹಾರಾಜರ ಹತ್ಯೆ ಖಂಡಿಸಿ ಜೈನ ಸಮಾಜದವರು ಮಂಗಳವಾರ ಪಟ್ಟಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಗುಡಗೇರಿ ಜೈನ ಸಮಾಜದ ಅಧ್ಯಕ್ಷ ದಯಾನಂದ ಕುಂದೂರ ಮಾತನಾಡಿ, ಅಹಿಂಸಾ ತತ್ವವನ್ನು ಸಾರುವ ಜೈನ ಧರ್ಮದ ಮುನಿ ಕಾಮಕುಮಾರನಂದಿ ಮಹಾರಾಜರನ್ನು ಘೋರವಾಗಿ ಹತ್ಯೆಗೈದಿರುವುದು ದುಃಖದ ಸಂಗತಿಯಾಗಿದೆ. ಸಂಸಾರವನ್ನು ತ್ಯಾಗ ಮಾಡಿ ಲೋಕದ ಶಾಂತಿಗಾಗಿ ಹಗಲಿರುಳು ತಮ್ಮನ್ನು ತಾವು ಅರ್ಪಿಸಿಕೊಂಡ ಮುನಿಗಳನ್ನು ಈ ರೀತಿ ಕೊಲೆಗೈದಿರುವುದು ದುರಂತ. ಎಲ್ಲ ಧರ್ಮದ ಸಾಧು-ಸಂತರಿಗೆ ಸರ್ಕಾರ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಗುಡೇನಕಟ್ಟಿ ಜೈನ ಸಮಾಜದ ಸಹ ಕಾರ್ಯದರ್ಶಿ ಬಸವರಾಜ ಯೋಗಪ್ಪನವರ ಮಾತನಾಡಿ, ನಮ್ಮ ಮುನಿ ಮಹಾರಾಜರು ಲೋಕದ ಆಸೆ ಬಿಟ್ಟು ತೀರ್ಥಂಕರ ಭೋದಿಸಿರುವ ಅಹಿಂಸಾ ತತ್ವವನ್ನು ಸಾರುವಂಥ ಮಹಾನ್ ಮುನಿ ಮಹಾರಾಜರಿಗೆ ಆದಂತಹ ಸ್ಥಿತಿ ಮರುಕಳಿಸದಂತೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಚಂದ್ರುಗೌಡ ಪಾಟೀಲ, ವರ್ಧಮಾನ ಭೀಮನಗೌಡ್ರ, ರೋಹಿತ ಪಾಟೀಲ, ಎಂ.ಟಿ. ಅಕ್ಕಿ, ರಾಮಚಂದ್ರ ಮುರಗಿ, ಭರತೇಶ ಸೋಮಾಪೂರ, ಬಾಹುಬಲಿ ಮಲ್ಲಿಗವಾಡ, ಕುಬೇರಪ್ಪ ನಂದಗಿ, ಬಸಪ್ಪ ಹೊಂಡದ, ಅಶೋಕ ನಂದಗಿ, ಸುನೀಲಗೌಡ ಪಾಟೀಲ, ಶಾಂತಪ್ಪ ದೊಡಮನಿ, ಬಸಪ್ಪ ಯೋಗಪ್ಪನವರ, ಸರಸ್ವತಿ ಮಲ್ಲಿಗವಾಡ, ದಯಾ ಪಾಟೀಲ ಇದ್ದರು.