ತುಮಕೂರು: ತುಮಕೂರು ಸ್ಮಾರ್ಟ್ಸಿಟಿ ಲಿ., ವತಿಯಿಂದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಉದ್ಯಾನವನದಲ್ಲಿ ಸ್ವಾಮೀಜಿ ಪ್ರತಿಮೆ ನಿರ್ಮಾಣಕ್ಕೆ ಶ್ರೀಸಿದ್ದಲಿಂಗ ಸ್ವಾಮೀಜಿ ಹಾಗೂ ಸಚಿವ ಜೆ.ಸಿ. ಮಾಧುಸ್ವಾಮಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.
ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಿಸಬೇಕೆಂದಿರುವ ಉದ್ಯಾನವನದಲ್ಲಿ ಸ್ವಾಮೀಜಿ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಎಂದು ತಿಳಿಸಿದರು.
50 ಲಕ್ಷ ರೂ. ವೆಚ್ಚದಲ್ಲಿ 2000 ಚದರ ಮೀಟರ್ ವಿಸ್ತೀರ್ಣದಲ್ಲಿ ಉದ್ಯಾನ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಉದ್ಯಾನವನದಲ್ಲಿ ಸ್ವಾಮೀಜಿಯವರ ಪ್ರತಿಮೆ ನಿರ್ಮಾಣವಾಗಲಿದ್ದು ಇದರ ಎತ್ತರವನ್ನು ಜಿಲ್ಲಾಡಳಿತ ನಿರ್ಧರಿಸಲಿದೆ ಎಂದು ಸ್ಮಾರ್ಟ್ ಸಿಟಿ ಲಿ.,
ಎಂಡಿ ಟಿ.ಭೂಬಾಲನ್ ವಿವರಿಸಿದರು.
ಪ್ರತಿಮೆ ಎತ್ತರ ಹಾಗೂ ಪ್ರತಿಮೆ ನಿರ್ಮಾಣಕ್ಕೆ ಅಗತ್ಯವಿರುವ ದೇಣಿಗೆಗೆ ಸಂಬಂಧಿಸಿದಂತೆ ಲಿಖಿತ ರೂಪದಲ್ಲಿ ಸಾರ್ವಜನಿಕರು ಸ್ಮಾರ್ಟ್ ಸಿಟಿಗೆ ಸಲ್ಲಿಸಿದಲ್ಲಿ ಪ್ರತಿಮೆ ಎತ್ತರವನ್ನು ಹೆಚ್ಚಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.
100 ಅಡಿ ಎತ್ತರದ ಪುತ್ಥಳಿಗೆ ಚಿಂತನೆ: ರೋಟರಿ ಸಂಸ್ಥೆ 45ಲಕ್ಷ ರೂ. ವೆಚ್ಚದಲ್ಲಿ ಪೀಠ, ಮಂಟಪ ಸೇರಿ ಡಾ.ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ(8.5 ಅಡಿ) ಒಟ್ಟು 20 ಅಡಿ ಎತ್ತರದ ಪುತ್ಥಳಿ ಸ್ಥಾಪಿಸಲಾಗುತ್ತಿದೆ, ಆದರೆ ಸಾರ್ವಜನಿಕರ ಸಹಕಾರದಿಂದ 100 ಅಡಿ ಎತ್ತರದ ಪುತ್ಥಳಿ ಸ್ಥಾಪಿಸುವ ಬಗ್ಗೆ ಚರ್ಚಿಸಿ ನಿರ್ಧರಿಸಲು ಜಿಲ್ಲಾಡಳಿತ ಮುಂದಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಶಿಲ್ಪಿಗಳಿಂದ ಪ್ರತಿಮೆ ಕೆತ್ತನೆ ಮಾಡಿಸುವ ಬಗ್ಗೆ ಜಿಲ್ಲಾಡಳಿತ ಚಿಂತಿಸಿದೆ.