ಸಿದ್ದಾಪುರ: ತಾಲೂಕಾದ್ಯಂತ ಶುಕ್ರವಾರ ರಾತ್ರಿ ಸುರಿದ ಮಳೆಯ ಅಬ್ಬರದಿಂದಾಗಿ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಗೊಳಗಾಗಿದ್ದು, ಅನೇಕ ಮನೆಗಳು ಜಕ್ಕಂಗೊಂಡಿವೆ.
ಸಿದ್ದಾಪುರದ ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಆಲಿಕಲ್ಲು ಮಳೆ ಇಡೀ ರೈತಾಪಿ ವರ್ಗದ ನೆಮ್ಮದಿಯನ್ನು ಕಸಿದಿದೆ. ವರುಣನ ಹೊಡೆತಕ್ಕೆ ಭತ್ತದ ತೆನೆಗಳ ಕಾಳು ಮಣ್ಣು ಪಾಲಾಗಿವೆ. ಇನ್ನೇನು ಬೆಳೆ ಕಟಾವು ಮಾಡಬೇಕು ಎನ್ನುವ ಹೊತ್ತಿಗೆ ಅಕಾಲಿಕ ಮಳೆಯ ಕಾಟ ಶುರುವಾಗಿರುವುದರಿಂದ, ಅನ್ನದಾತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈಗಾಗಲೇ ಬೆಳೆ ನಾಟಿಯಿಂದ ನಿರ್ವಹಣೆಗೆ ಕ್ರಿಮಿನಾಶಕ, ರಸಗೊಬ್ಬರಕ್ಕೆ ಸಾವಿರಾರು ರೂ.ವ್ಯಯಿಸಲಾಗಿದೆ. ಈಗ ಕಟಾವಿಗೆ ಬಂದ ಭತ್ತ ಮಣ್ಣು ಪಾಲಾಗಿರುವುದರಿಂದ ರೈತರ ಆತ್ಮಬಲವೇ ಹುಡುಗಿದಂತಾಗಿದೆ. ಗುಂಡೂರು, ಸಿದ್ದಾಪುರ, ಲಕ್ಷ್ಮೀಕ್ಯಾಂಪ್, ರವಿನಗರ, ಉಳೇನೂರು, ಈಳಿಗನೂರು, ಕೊಟ್ನೇಕಲ್, ಬರಗೂರು, ಜಮಾಪುರ, ಕೆ.ಜಿ. ಕ್ಯಾಂಪ್ ಸೇರಿದಂತೆ ಇತರೆ ಗ್ರಾಮಗಳಲ್ಲಿ ಭತ್ತದ ಗದ್ದೆಗಳು ಮಳೆಯ ಅಬ್ಬರಕ್ಕೆ ಮಕಾಡೆ ಮಲಗಿವೆ. ಸದ್ಯ ಮಾರುಕಟ್ಟೆಯಲ್ಲಿ ಸಹ ಬೆಳೆಗೆ ಸೂಕ್ತ ಬೆಲೆ ದೊರೆಯದಿರುವುದು ಅನ್ನದಾತರನ್ನು ಚಿಂತೆಗೀಡು ಮಾಡಿದೆ. ಅಲ್ಲದೆ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಳೆಯ ಹೊಡೆತಕ್ಕೆ ಬೃಹತ್ ಆಕಾರದ ಮರ ಧರೆಗುರುಳಿದೆ.
ಆಲಿಕಲ್ಲು ಮಳೆಗೆ ಸಂತಸ ಪಟ್ಟ ಕನಕಗಿರಿ ಜನತೆ
ಕನಕಗಿರಿ: ಪಟ್ಟಣದಲ್ಲಿ ಗುರುವಾರ ರಾತ್ರಿ ಭಾರಿ ಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದ್ದು, ಒಂದೆಡೆ ಜನರ ಸಂತಸಕ್ಕೆ ಕಾರಣವಾದರೆ ಮತ್ತೊಂದೆಡೆ ಗಾಳಿಗೆ ಶೆಡ್ಗಳು, ಗಿಡಗಳು ಮುರಿದು ಬಿದ್ದಿದ್ದು ಕೆಲವರು ವ್ಯಥೆ ಪಡುವಂತಾಗಿದೆ.
ಇತ್ತೀಚಿನ ವರ್ಷಗಳಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಆಲಿಕಲ್ಲಿನ ಮಳೆಯಾಗಿರಲಿಲ್ಲ. ಆದರೆ, ಗುರುವಾರ ತಡರಾತ್ರಿ ಭಾರಿ ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆ ಸುರಿದು ಗುಡುಗು, ಸಿಡಿಲು ಹಾಗೂ ಮಿಂಚಿಗೆ ಜನ ಹೊರಬರಲು ಹೆದರಿದರು. ಆದರೂ ಕೆಲವರು ಆಲಿಕಲ್ಲುಗಳನ್ನು ಸಂಗ್ರಹಿಸಿ ತಿನ್ನುವುದಕ್ಕೆ ಮುಂದಾಗಿದ್ದರು. ಚೇಳು ಕಚ್ಚಿದಾಗ ಈ ಆಲಿಕಲ್ಲು ಔಷಧಿಯಾಗಿ ಬಳಕೆಯಾಗಿ ಮಾಡುವುದರಿಂದ ಕೆಲ ಹಿರಿಯರು ಆಲೆಕಲ್ಲುಗಳನ್ನು ಬಾಟಲಿಯಲ್ಲಿ ಸಂಗ್ರಹಿಸಲು ಮುಂದಾಗಿದ್ದರು. ಗಾಳಿಗೆ ಶೆಡ್, ಗಿಡಗಳಲ್ಲದೆ, ಮಾವಿನ ಕಾಯಿಗಳೂ ಉದುರಿವೆ ಎನ್ನಲಾಗಿದೆ.