ಮಾಗಡಿ : ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮಂಗಳವಾರ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ಗ್ರಾಮೀಣ ಭಾಗದ ಪ್ರಜ್ಞಾವಂತರು ತಮ್ಮ ಮೇಲೆ ಗೌರವ, ವಿಶ್ವಾಸ, ನಂಬಿಕೆ ಯಿಟ್ಟು ಚುನಾಯಿಸಿ ಗೌರವ ಸ್ಥಾನದಲ್ಲಿ ಕೂರಿಸಿದ್ದಾರೆ. ಪಂಚಾಯಿತಿಗಳಿಗೆ ಸರ್ಕಾರದಿಂದ ಹೆಚ್ಚು ಅನುದಾನ ಲಭಿಸುತ್ತಿದ್ದು, ಗ್ರಾಪಂಗಳು ಇಂದು ಮಿನಿ ವಿಧಾನಸೌಧದಂತಾಗಿವೆ.
ಪಂಚಾಯಿತಿ ಅಧ್ಯಕ್ಷರಿಗೆ ಚೆಕ್ಗಳಿಗೆ ಸಹಿ ಹಾಕುವ ಅಧಿಕಾರ ಸಿಕ್ಕಿದೆ. ಶಾಸಕರಿಗೂ ಅಂತಹ ಅಧಿಕಾರವನ್ನು ಸರ್ಕಾರ ನೀಡಿಲ್ಲ. ಅಧ್ಯಕ್ಷ – ಉಪಾಧ್ಯಕ್ಷರಾಗಿ ಹೊಸದಾಗಿ ಆಯ್ಕೆಯಾದವರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ, ಇಲ್ಲದಿದ್ದರೆ ಆಯ್ಕೆ ಮಾಡಿದ ಜನತೆಗೆ ಮೋಸ ಮಾಡಿದಂತಾಗುತ್ತದೆ. ಪಕ್ಷಾತೀತವಾಗಿ ಕೆಲಸ ಮಾಡಿ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ದೊರಕಿಸಲು ಶ್ರಮಿಸಿ ಎಂದು ಸಲಹೆ ನೀಡಿದರು.
ಕಣ್ಣೂರು ಗ್ರಾಪಂ ಅಧ್ಯಕ್ಷ ಕೆ.ಎಸ್. ಜಗದೀಶ್ ಮಾತನಾಡಿ, ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಶ್ರೀಗಳು, ಸಾಲುಮರದ ತಿಮ್ಮಕ್ಕ, ನಾಡಪ್ರಭು ಕೆಂಪೇಗೌಡರು ಹುಟ್ಟಿರುವ ಮಾಗಡಿಯಲ್ಲಿ ನಾವು ಜನಿಸಿರುವುದಕ್ಕೆ ಸಂತೋಷವಾಗುತ್ತದೆ.
ಅವರ ಆಶೀರ್ವಾದದಿಂದ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಚಿಕ್ಕಹಳ್ಳಿ ಗ್ರಾಪಂ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿ, ನಮಗೆ ಅಧಿಕಾರಿ ನೀಡಿರುವ ನಾಯಕರು ಹಾಗೂ ಮತದಾರರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ತಿಳಿಸಿದರು.
ಬಾಣವಾಡಿ ಗ್ರಾಪಂ ಅಧ್ಯಕ್ಷ ಉಡುಗುಂಟೆ ವಿ.ಪಿ. ಪ್ರಕಾಶ್, ಕಲ್ಯಾ ಗ್ರಾಪಂ ಅಧ್ಯಕ್ಷೆ ಅನಿತಾ, ಜಿಪಂ ಮಾಜಿ ಸದಸ್ಯ ಎಸ್ಸಿಬಿಎಸ್ ಶಿವರುದ್ರಯ್ಯ, ಸೋಲೂರು ಗ್ರಾಪಂ ಮಾಜಿ ಅಧ್ಯಕ್ಷ ಶರ್ಮ, ಕಣ್ಣೂರು ಚಂದ್ರಶೇಖರ್, ದಕ್ಷಿಣಾ ಮೂರ್ತಿ, ಪ್ರಭುದೇವ್, ಸಿದ್ದಲಿಂಗಮೂರ್ತಿ ಇತರರು ಇದ್ದರು.