ಬೆಂಗಳೂರು: ವೃತ್ತಿಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದರೂ ಮಾಡಿದ್ದು ಮಾತ್ರ ಪಕ್ಕಾ ದರೋಡೆ. ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯನ್ನು ಅಪಹರಿಸಿ ಆತನ ಬಳಿದ್ದ 26.50 ಲಕ್ಷ ರೂ. ದರೋಡೆ ಮಾಡಿದ್ದ ಎಸ್ಐ ಹಾಗೂ ಆತನ ಮಾವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಳೆದ ಬುಧವಾರ (ಆಗಸ್ಟ್ 19) ಶಿವಕುಮಾರ್ ಎಂಬುವರು ತನ್ನ ಮಾಲೀಕ ಮೋಹನ್ ತಿಳಿಸಿದ್ದಂತೆ ಕುಂಬಾರಪೇಟೆಯ ಭರತ್ ಎಂಬುವರಿಂದ 26.50 ಲಕ್ಷ ರೂ. ಪಡೆದುಕೊಂಡು ಚಿಕ್ಕಪೇಟೆಯ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಕುಳಿತಿದ್ದರು.
ಇದನ್ನೂ ಓದಿ; ಲಾಕ್ಡೌನ್ ನಡುವೆಯೂ ಹೊಸ ಕೆಲಸ ಗಿಟ್ಟಿಸಿಕೊಂಡ ಅದೃಷ್ಟಶಾಲಿಗಳಿವರು…!
ಕೆಲ ಹೊತ್ತಿನಲ್ಲಿಯೇ ಅಲ್ಲಿಗೆ ಬಂದ ಕೆಲವರು ಶಿವಕುಮಾರ್ನನ್ನು ಬೆದರಿಸಿ ಮೊಬೈಲ್ಗಳನ್ನು ಕಿತ್ತುಕೊಂಡಿದ್ದಾರೆ. ಶಿವಕುಮಾರ್ನನ್ನು ಬೆದರಿಸಿ ಕಾರನ್ನು ತಾವು ಹೇಳುವ ಕಡೆಗೆ ಚಲಾಯಿಸಬೇಕೆಂದು ಹೇಳಿದ್ದಾರೆ. ಅಲ್ಲಿಂದ ಯುನಿಟಿ ಕಟ್ಟಡದ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಹಿಂಬಾಲಿಸಿಕೊಂಡು ಬರುತ್ತಿದ್ದ ಮತ್ತೊಂದು ಕಾರಿನಲ್ಲಿದ್ದ ಕೆಲವರು ಶಿವಕುಮಾರ್ ಬಳಿಯಿದ್ದ ಹಣವನ್ನು ಕಸಿದುಕೊಂಡು ಬಳಿಕ ಆತನನ್ನು ಲಾಲ್ಬಾಗ್ ಬಳಿ ಬಿಟ್ಟು ಕಳುಹಿಸಿದ್ದಾರೆ.
ಈ ಇಡೀ ಪ್ರಕರಣದಲ್ಲಿ ಯೂನಿಫಾರ್ಮ್ನಲ್ಲಿದ್ದುಕೊಂಡೇ ಸಾಥ್ ನೀಡಿದ್ದು, ಎಸ್ಜೆ ಪಾರ್ಕ್ ಠಾಣೆ ಸಬ್ ಇನ್ಸ್ಪೆಕ್ಟರ್ ಜೀವನ್ಕುಮಾರ್. ಈ ಡಕಾಯಿತಿಗೆ ಪ್ಲಾನ್ ರೂಪಿಸಿದ್ದು, ಪತ್ರಕರ್ತ ಜ್ಞಾನಪ್ರಕಾಶ್. ಈ ಜ್ಞಾನಪ್ರಕಾಶ್ನ ಅಣ್ಣನ ಮಗಳನ್ನೇ ಈ ಜೀವನ್ಕುಮಾರ್ ಮದುವೆಯಾಗಿದ್ದಾನೆ. ಸುಲಭವಾಗಿ ಹಣ ಸಂಪಾದಿಸುವ ಹುಚ್ಚಿಗೆ ಬಿದ್ದು, ಮಾವನೊಂದಿಗೆ ಸೇರಿ ಡಕಾಯಿತಿ ಮಾಡಿದ್ದಾನೆ.
ಇದನ್ನೂ ಓದಿ; ವಾಹನ ಸವಾರರಿಗೆ ಶುಭ ಸುದ್ದಿ; ಡಿ.31ರವರೆಗೂ ಲೈಸೆನ್ಸ್, ದಾಖಲೆಗಳ ಮಾನ್ಯತಾ ಅವಧಿ ವಿಸ್ತರಣೆ
ಈ ಡಕಾಯಿತಿಗೆ ನಡೆಸಲು ಕಾರಣನಾದವನು ಕಿಶೋರ್. ಈತ ಶಿವಕುಮಾರ್ ಬಳಿ ಹಣವಿರುವುದನ್ನು ಜ್ಞಾನಪ್ರಕಾಶ್ಗೆ ತಿಳಿಸಿದ್ದ. ಹೀಗಾಗಿ ಅಳಿಯ ಜೀವನ್ಕುಮಾರ್ ಜತೆ ಸೇರಿ ಡಕಾಯಿತಿ ನಡೆಸಿ ಹಣ ಹಂಚಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.
ಮೆಟ್ರೋ ರೈಲು ಶುರುವಾಗುತ್ತೆ, ಶಾಲಾ- ಕಾಲೇಜುಗಳು ಮುಚ್ಚಿರುತ್ತೆ; ಅನ್ಲಾಕ್ 4.0 ಹೀಗಿರುತ್ತೆ…!