More

    ಭಾರತೀಯ ಧಾರ್ಮಿಕ ಚಿಂತನೆ ಸರ್ವಮಾನ್ಯ: ಶ್ರೀನಿವಾಸ ಕಲ್ಯಾಣೋತ್ಸವ ಸಭಾ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣ

    ಮಂಗಳೂರು: ಹಿಂದು ಧರ್ಮವೆಂದರೆ ಜೀವನ ಧರ್ಮ. ಇಂದು ಮನುಷ್ಯನಿಗೆ ಬೇಕಾದ ಭೌತಿಕ ವಸ್ತುಗಳೆಲ್ಲವೂ ಮಾರುಕಟ್ಟೆಯಲ್ಲಿ ದೊರಕುತ್ತದೆ. ಆದರೆ ಅವಶ್ಯವಾಗಿ ಬೇಕಾದ ನೆಮ್ಮದಿ, ಸುಖ, ಶಾಂತಿ ಧಾರ್ಮಿಕ ಆರಾಧನೆಯಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ, ಆನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು.

    ದೇರೆಬೈಲು ಬಳಿಯ ಮಂದಾರಬೈಲು ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದಲ್ಲಿ ಫೆ.9ರಿಂದ 11ರವರೆಗೆ ನಡೆಯುವ ಗಣಯಾಗ, ಶತಚಂಡಿಕಾಯಾಗ, ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ಸಾಯಂಕಾಲ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇಂದು ಭಾರತ ವಿಶ್ವಮಾನ್ಯವಾಗಿದೆ. ಜಗತ್ತಿನ ಎಲ್ಲ ಧರ್ಮದವರೂ ಭಾರತೀಯ ಧಾರ್ಮಿಕ ಚಿಂತನೆಗೆ ಮಾರು ಹೋಗುತ್ತಿದ್ದಾರೆ. ಯೋಗ, ಧ್ಯಾನ, ಧರ್ಮಾಚರಣೆಯಿಂದ ಜೀವನದಲ್ಲಿ ನೆಮ್ಮದಿ ಸಾಧ್ಯ. ಸನಾತನ ವರ್ಷಗಳಿಂದ ನಮ್ಮ ಹಿರಿಯರು ಧಾರ್ಮಿಕ ಕಟ್ಟುಪಾಡು, ಆಚರಣೆಯ ಮೌಲ್ಯಗಳನ್ನು ಮನಗಾಣಿಸಿದ್ದಾರೆ. ಮಕ್ಕಳಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ ಆಚರಣೆಯ ಮೌಲ್ಯವನ್ನು ಉದ್ಧೀಪನಗೊಳಿಸುವ ಕಾರ್ಯವನ್ನು ಮಾತೆಯರು ಮಾಡಬೇಕಿದೆ. ಇದರಿಂದ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.

    ಧರ್ಮದ ಅನುಷ್ಠಾನದಿಂದ ಜೀವನ ನಡೆಸಿದಾಗ ಮಾತ್ರ ಸಂಸಾರದಲ್ಲಿ ಸುಖ, ಶಾಂತಿ, ನೆಮ್ಮದಿ ಸಾಧ್ಯ. ಧಾರ್ಮಿಕ ಆಚರಣೆಗಳು, ಪುರಾಣಕತೆಗಳು, ಯಕ್ಷಗಾನದಂತಹ ಆರಾಧನೆಗಳ ಮೂಲಕವೂ ಧಾರ್ಮಿಕ ಅನುಷ್ಠಾನ ಸಾಧ್ಯ. ಅಂತಹ ಪ್ರಯತ್ನಕ್ಕೆ ಪೂರಕವಾಗಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಅರ್ಥಪೂರ್ಣ. ಜನ ಸನ್ಮಾರ್ಗದಲ್ಲಿ ನಡೆಯಲು ಪೂರಕ. ಧರ್ಮದ ಅಡಿಯಲ್ಲಿ ಬದುಕಿದಾಗ ಮಾತ್ರ ರಾಮರಾಜ್ಯ ಸಾಧ್ಯ ಎಂದರು.

    ಮಂದಾರಬೈಲು ಶ್ರೀ ದುರ್ಗಾಪರಮೇಶ್ವರೀ ವೆಂಕಟರಮಣ ದೇವಸ್ಥಾನದ ತಂತ್ರಿ, ಮಾರ್ಗದರ್ಶಕ ಬ್ರಹ್ಮಶ್ರೀ ವಿಠಲದಾಸ ತಂತ್ರಿ ಆಶೀರ್ವಚನ ನೀಡಿದರು. ಶಾಸಕ ಡಾ.ವೈ.ಭರತ್ ಶೆಟ್ಟಿ, ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಬಿ ಪುರಾಣಿಕ್, ಮಂಗಳೂರು ಮೇಯರ್ ಜಯಾನಂದ ಅಂಚನ್, ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ರಂಜಿನಿ ಕೋಟ್ಯಾನ್, ಕೊಂಚಾಡಿ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ಜೆ.ಬಾಲಕೃಷ್ಣ ಕೊಟ್ಟಾರಿ, ಶ್ರೀನಿವಾಸ ಕಲ್ಯಾಣೋತ್ಸವ ಸೇವಾ ಸಮಿತಿ ಅಧ್ಯಕ್ಷ ದುರ್ಗಾದಾಸ್ ಇರ್ವತ್ತಾಯ, ಕಾರ್ಯಾಧ್ಯಕ್ಷ ಲಕ್ಷ್ಮಣ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಕಡಂಬಾರ್ ಉಪಸ್ಥಿತರಿದ್ದರು. ಸುಧಾಕರ್ ಪೇಜಾವರ ಮತ್ತು ಮುರಳಿ ಭಾರಾಧ್ವಜ್ ಕಾರ್ಯಕ್ರಮ ನಿರೂಪಿಸಿದರು.

    ಕಾರ್ಯಕ್ರಮದ ಬಳಿಕ ಸನಾತನ ನಾಟ್ಯಾಲಯದ ಕಲಾವಿದರಿಂದ ‘ಸನಾತನ ನಾಟ್ಯಾಂಜಲಿ’ ಕಾರ್ಯಕ್ರಮ ನಡೆಯಿತು.

    ಹೊರೆಕಾಣಿಕೆ ಮೆರವಣಿಗೆ: ಕ್ಷೇತ್ರದಲ್ಲಿ ಬೆಳಗ್ಗೆ ತೋರಣ ಮುಹೂರ್ತ, ಗಣಯಾಗ, ಏಕಾದಶ ರುಧ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಬಳಿಕ ಶರವು ಶ್ರೀ ಮಹಾಗಣಪತಿ ದೇವಸ್ಥಾನ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಹಾಗೂ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ ಉಪಸ್ಥಿತಿಯಲ್ಲಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

    ಹಿರಿಯರು ಕೊಟ್ಟ ಆಧ್ಯಾತ್ಮ ಶಕ್ತಿ ಸನಾತನ ಹಿಂದು ಧರ್ಮದ ಜೀವಾಳ, ಇದನ್ನು ಅರಿತು ಧರ್ಮಪಥದಲ್ಲಿ ನಡೆಯಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಧಾರ್ಮಿಕ ಕಾರ್ಯಗಳಿಗೆ ಸಹಕಾರ ನೀಡುವುದು ನಮ್ಮ ಆದ್ಯತೆಯಾಗಬೇಕಿದೆ.
    -ಎಂ.ಬಿ ಪುರಾಣಿಕ್, ಅಧ್ಯಕ್ಷ, ಶಾರದಾ ಸಮೂಹ ಶಿಕ್ಷಣ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts