ಬೆಂಗಳೂರು: ರಾಜಧಾನಿಯಲ್ಲಿ ಕಳೆದ ಮೂರು ವಾರಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಎಂಟು ಪಟ್ಟು ಹೆಚ್ಚಳವಾಗಿದೆ. ಆತಂಕದ ವಿಷಯವೆಂದರೆ ಸಾವಿನ ಪ್ರಮಾಣ ಕೂಡ 9 ಪಟ್ಟು ಏರಿಕೆ ಕಂಡಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಸಂಕಷ್ಟಕ್ಕೆ ತುತ್ತಾಗಿರುವ ನಗರವೆಂದರೆ ಬೆಂಗಳೂರು. ಇದಕ್ಕೆ ಹಲವು ಕಾರಣಗಳಿವೆ ಎಂದು ವೈದ್ಯರು ವಿಶ್ಲೇಷಿಸುತ್ತಾರೆ. ವೈದ್ಯಕೀಯ ಚಿಕಿತ್ಸೆ ಪಡೆಯುವಲ್ಲಿ ನಿಧಾನಿಸುತ್ತಿರುವುದು, ಔಷಧ ಪೂರೈಕೆಯಲ್ಲಾಗುತ್ತಿರುವ ವಿಳಂಬ ಹಾಗೂ ಚಿಕಿತ್ಸೆ ನೀಡಲು ಮಾನವ ಸಂಪನ್ಮೂಲದ ಕೊರತೆ ಪ್ರಮುಖವಾಗಿವೆ.
ಬೆಂಗಳೂರಿನಲ್ಲಿ ಜುಲೈ 1 ರಂದು ಸೋಂಕಿತರ ಸಂಖ್ಯೆ 5,290 ಇತ್ತು. ಈಗ 45,453 ಕ್ಕೆ ಮುಟ್ಟಿದೆ. ಸಕ್ರಿಯ ಪ್ರಕರಣಗಳು 33,155. ಸಾವಿನ ಸಂಖ್ಯೆ 97 ಇದ್ದದ್ದು ಈಗ 892 ಆಗಿದೆ.
ಇದನ್ನೂ ಓದಿ; ರಾಜ್ಯದಲ್ಲಿ ಎತ್ತ ಸಾಗುತ್ತಿದೆ ಕೋವಿಡ್? ಭರವಸೆ ಮೂಡಿಸದ ಅಂಕಿ-ಸಂಖ್ಯೆಗಳು; ಇಂದೆಷ್ಟು ಜನರಿಗೆ ಸೋಂಕು?
ದಚಿಕಿತ್ಸೆ ಪಡೆಯಲು ವಿಳಂಬ ಮಾಡುತ್ತಿರುವುದರಿಂದ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ ಎನ್ನುತ್ತಾರೆ ಸುಹಾಸ್ ಆಸ್ಪತ್ರೆಯ ಡಾ. ಜಗದೀಶ್ ಹಿರೇಮಠ. ಕೆಲವರಂತೂ ಪರಿಸ್ಥಿತಿ ಕೈ ಮೀರಿ ಮೇಲೆ ತಡರಾತ್ರಿ ವೆಂಟಿಲೇಟರ್ ಸೌಲಭ್ಯವಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಹೀಗಾಗಿ ತ್ವರಿತವಾಗಿ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು ಎನ್ನುವುದು ಇವರ ಸಲಹೆ.
ರೆಮ್ಡೆಸಿವಿರ್ ಕೊರತೆ: ಸದ್ಯ ಕೋವಿಡ್ ರೋಗಿಗಳಿಗೆ ನೀಡಲಾಗುತ್ತಿರುವ ರೆಮ್ಡೆಸಿವಿರ್ ಔಷಧದ ಕೊರತೆ ಇದೆ. ಇದನ್ನು ದಾಸ್ತಾನು ಮಾಡಿಕೊಳ್ಳಲು ಈಗಲೂ ಹೆಣಗಾಡುತ್ತಿದ್ದೇವೆ ಎನ್ನುತ್ತಾರೆ ವೈದ್ಯರು. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಇಂಜೆಕ್ಷನ್ ಸಿಗುವುದು ದುಸ್ತರವಾಗಿದೆ ಎಂದು ಹೇಳುತ್ತಾರೆ. ಇದಲ್ಲದೇ, ಇದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಇವೆ.
ಇದನ್ನೂ ಓದಿ; ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ?
ಮಾನವ ಸಂಪನ್ಮೂಲ ಕೊರತೆ: ಆಸ್ಪತ್ರೆಗಳಲ್ಲಿ ಮಾನವ ಸಂಪನ್ಮೂಜಲದ ಕೊರತೆ ಕಾಡುತ್ತಿದೆ. ಇರುವ ಸಿಬ್ಬಂದಿಯೇ 18- 20 ತಾಸು ಕೆಲಸ ಮಾಡುವಂತಾಗಿದೆ. ಜತೆಗೆ, ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಕೇರ್ ಸೆಂಟರ್ಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ವೈದ್ಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿ ನೇಮಕವಾಗಬೇಕಿದೆ.
ಇದಲ್ಲದೇ, ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಗಮನಿಸಿದರೆ ಬೆಂಗಳೂರಿನ ಹಲವು ಭಾಗಗಳಲ್ಲಿ ಇದು ಸಮುದಾಯಕ್ಕೆ ಹಬ್ಬಿರುವುದು ಕಂಡು ಬರುತ್ತಿದೆ ಎಂದು ವೈದ್ಯರು ಹೇಳುತ್ತಾರೆ.
ಕರೊನಾ ಲಸಿಕೆಯಿಂದ ಡಿಎನ್ಎ ಬದಲಾವಣೆ; 7 ಲಕ್ಷ ಜನರಿಗೆ ಅಡ್ಡ ಪರಿಣಾಮ; ಇಲ್ಲಿದೆ ಫ್ಯಾಕ್ಟ್ ಚೆಕ್….!