ಮೀರತ್: ಉತ್ತರ ಪ್ರದೇಶದ ಮೀರತ್ನಲ್ಲಿ ಮೊಬೈಲ್ ಸ್ಫೋಟಗೊಂಡ ಪರಿಣಾಮ ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡು ನಾಲ್ವರು ಅಮಾಯಕ ಮಕ್ಕಳು ಸಾವನ್ನಪ್ಪಿರುವ ಸುದ್ದಿ ಬೆಳಕಿಗೆ ಬಂದಿದೆ. ಅಪಘಾತದ ವೇಳೆ ಮಕ್ಕಳನ್ನು ರಕ್ಷಿಸಲು ಯತ್ನಿಸಿದಾಗ ಅವರ ಪೋಷಕರಿಗೂ ಬೆಂಕಿ ತಗುಲಿದೆ.
ಮೂಲತಃ ಮುಜಾಫರ್ನಗರದ ಜಾನಿ ಕುಟುಂಬ ಜನತಾ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಜಾನಿ ದಿನಗೂಲಿ ಕೆಲಸ ಮಾಡುತ್ತಿದ್ದರು. ಹೋಳಿ ನಿಮಿತ್ತ ಶನಿವಾರ ಅವರು ಮನೆಯಲ್ಲಿದ್ದು, ಪತ್ನಿ ಬಬಿತಾ ಅಡುಗೆ ಮಾಡುತ್ತಿದ್ದರು. ಮಕ್ಕಳಾದ ಸಾರಿಕಾ (10), ನಿಹಾರಿಕಾ (8), ಗೋಲು (6) ಮತ್ತು ಕಾಲು (5) ಕೋಣೆಯಲ್ಲಿದ್ದರು.
ಕೋಣೆಯಲ್ಲಿದ್ದ ಬೋರ್ಡ್ನಲ್ಲಿಯೇ ಮೊಬೈಲ್ ಚಾರ್ಜ್ ಆಗುತ್ತಿತ್ತು ಎಂದು ಹೇಳಲಾಗುತ್ತಿದೆ. ಆಗ ಚಾರ್ಜರ್ ನಲ್ಲಿ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಡ್ ಮೇಲೆ ಹರಡಿದ್ದ ಫೋಮ್ ಮ್ಯಾಟ್ರೆಸ್ ಮೇಲೆ ಕಿಡಿ ಬಿದ್ದು, ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಬೆಂಕಿ ಏಕಾಏಕಿ ಭಾರಿ ಸ್ವರೂಪ ಪಡೆದುಕೊಂಡಿದೆ.
ಚಿಂತಾಜನಕ ಸ್ಥಿತಿಯಲ್ಲಿದ್ದ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ವೇಳೆ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಪೋಷಕರು ಪಿಲ್ಹಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತಿ-ಪತ್ನಿಯರ ಸ್ಥಿತಿ ಚಿಂತಾಜನಕವಾಗಿದೆ.