ಶಿವಾನಂದ ತಗಡೂರು
ಬೆಂಗಳೂರು: ರಾಜಧಾನಿಯಲ್ಲಿ ಎಲ್ಲ ವರ್ಗದವರಿಗೆ ಆಕರ್ಷಣೆಯ ಕೇಂದ್ರಗಳಾಗಿ ರೂಪುಗೊಂಡಿದ್ದ ಮಾಲ್ಗಳ ಕಾರುಬಾರಿಗೆ ಬ್ರೇಕ್ ಬಿದ್ದು ಎರಡು ತಿಂಗಳು ಕಳೆದಿದ್ದು, 10 ಸಾವಿರಕ್ಕೂ ಹೆಚ್ಚು ಜನರ ಉದ್ಯೋಗಕ್ಕೆ ಕುತ್ತು ಬಂದಿದೆ. ಬೆಂಗಳೂರಿನಲ್ಲಿ ಬೃಹತ್ 26 ಮಾಲ್ಗಳು ಸೇರಿ, ರಾಜ್ಯದಲ್ಲಿ ಸಣ್ಣ ಹಾಗೂ ದೊಡ್ಡ ಪ್ರಮಾಣದ 286ಕ್ಕೂ ಹೆಚ್ಚು ಮಾಲ್ಗಳಿವೆ. ಲಾಕ್ಡೌನ್ ಬಳಿಕ, ಉದ್ಯೋಗಿಗಳು ಮೊದಲ ತಿಂಗಳ ಸಂಬಳ ಕಂಡರೂ, 2ನೇ ತಿಂಗಳ ಹೊತ್ತಿಗೆ ಕಣ್ಣು ಬಾಯಿಬಿಡುತ್ತಿದ್ದಾರೆ. ಶೋರೂಂಗಳ ಮಾಲೀಕರಿಗೆ ಮಾತ್ರವಲ್ಲ, ನೂರಾರು ಕೋಟಿ ರೂ. ಸುರಿದು ಮಾಲ್ಗಳನ್ನು ಕಟ್ಟಿಸಿದವರಿಗೂ ಆರ್ಥಿಕ ಸಂಕಷ್ಟ ಎದುರಾಗಿದೆ. ಇನ್ನು ಪರೋಕ್ಷ ವಾಗಿ ಉದ್ಯೋಗ ಅವಲಂಬಿಸಿದವರ ಸ್ಥಿತಿಯನ್ನಂತೂ ಕೇಳುವವರೇ ಇಲ್ಲ.
ಕೊಟ್ಯಂತರ ರೂ. ಬಂಡವಾಳ ಹಾಕಿ ಮಾಲ್ಗಳನ್ನು ಕಟ್ಟಿದ ಬಹುಪಾಲು ಎಲ್ಲರೂ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ರಾಜ್ಯದ ಮಾಲ್ಗಳಲ್ಲಿನ ಸಾವಿರಾರು ಜನರ ಉದ್ಯೋಗಕ್ಕೂ ಕುತ್ತು ಬಂದಿದೆ. ಶೋರೂಂಗಳಲ್ಲಿ ವ್ಯಾಪಾರವಿಲ್ಲ, ನಮಗೆ ಬಾಡಿಗೆ ಬರುತ್ತಿಲ್ಲ. ಸರ್ಕಾರ ಇನ್ನುಮುಂದಾದರೂ ಮಾಲ್ಗಳ ಸಮಸ್ಯೆಯತ್ತ ಗಮನಹರಿಸಬೇಕು.
| ಉದಯ ಗರುಡಾಚಾರ್
ಶಾಸಕ, ಗರುಡ ಮಾಲ್ ಮಾಲೀಕ
5 ಸಾವಿರ ಕೋಟಿ ರೂ. ನಷ್ಟ: ರಾಜ್ಯದಲ್ಲಿನ ಮಾಲ್ಗಳ ಪೈಕಿ ಶೇ.50ಕ್ಕೂ ಹೆಚ್ಚು ವಹಿವಾಟು ಬೆಂಗಳೂರಿನಲ್ಲಿ ನಡೆದರೆ, ಇನ್ನುಳಿದದ್ದು ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಯುತ್ತದೆ ಎಂಬ ಅಂದಾಜಿದೆ. ಎಲ್ಲ ಮಾಲ್ಗಳಿಂದ ಪ್ರತಿ ತಿಂಗಳು 2 ಸಾವಿರ ಕೋಟಿ ರೂ. ವಹಿವಾಟು ನಡೆದರೆ, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ವಹಿವಾಟು 3 ಸಾವಿರ ಕೋಟಿ ರೂ.ಗಳಿಗೆ ಹಿಗ್ಗುತ್ತಿತ್ತು. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತಿಹೆಚ್ಚು ವ್ಯಾಪಾರ ವಹಿವಾಟು ನಡೆಯುವುದು ವಾಡಿಕೆ. ಆದರೆ, ಅದೀಗ ಎಲ್ಲವೂ ಶೂನ್ಯದಲ್ಲಿ ನಿಂತಿದ್ದು, ಕಳೆದೆರಡು ತಿಂಗಳಲ್ಲಿ ರಾಜ್ಯದಲ್ಲಿ ಮಾಲ್ಗಳು 5 ಸಾವಿರ ಕೋಟಿ ರೂ. ನಷ್ಟ ಅನುಭವಿಸಿವೆ.
ಮಾಲ್ ಮಾಲೀಕರ ಗೋಳು: ಮಾಲ್ಗಳಲ್ಲಿ ಅಂಗಡಿ ಮುಂಗಟ್ಟು ಇಟ್ಟುಕೊಂಡವರಿಗೆ ನಯಾಪೈಸೆ ವಹಿವಾಟು ನಡೆದಿಲ್ಲ. ಹಾಗಾಗಿ ಬಾಡಿಗೆ ಕೊಡಲಾಗದ ಸ್ಥಿತಿಗೆ ತಲುಪಿದ್ದಾರೆ. ಇತ್ತ ಮಾಲ್ಗಳ ಮಾಲೀಕರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲಾಗದೆ ಮೌನಕ್ಕೆ ಶರಣಾಗಿದ್ದಾರೆ. ನೂರಾರು ಕೋಟಿ ರೂ. ಬಂಡವಾಳ ಹಾಕಿರುವ ಅವರು, ಪ್ರತಿ ತಿಂಗಳ ಬ್ಯಾಂಕ್ ಇಎಂಐ ಲಕ್ಷ ರೂ.ಗಳ ಲೆಕ್ಕದಲ್ಲಿಯೇ ಕಟ್ಟಬೇಕಿದೆ. ನಮ್ಮ ಕಷ್ಟವನ್ನು ಯಾರಿಗೆ ಹೇಳುವುದು ಎಂದು ಮಾಲೀಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಕರೊನಾ ಲಾಕ್ಡೌನ್ ಘೋಷಣೆಗೂ ಮುನ್ನವೇ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಸರ್ಕಾರದ ಆದೇಶ ಪ್ರಕಾರ 26 ಮಾಲ್ಗಳನ್ನು ಬಂದ್ ಮಾಡಿಸಲಾಗಿದೆ.
| ಬಿ.ಎಚ್. ಅನಿಲ್ಕುಮಾರ್ ಬಿಬಿಎಂಪಿ ಆಯುಕ್ತ
ಸೆಕ್ಯೂರಿಟಿ ಗಾರ್ಡ್ಗಳು, ಸಹಾಯಕರು, ರ್ಪಾಂಗ್ ನಿರ್ವಹಿಸುವವರು, ಶೋರೂಂಗಳಲ್ಲಿ ಕೆಲಸ ಮಾಡುವವರು, ಮಲ್ಟಿಪ್ಲೆಕ್ಸ್ಗಳಲ್ಲಿ ಕಾರ್ಯ ನಿರ್ವಹಿಸುವವರು, ಇಂಜಿನಿಯರ್ಗಳು, ಟೆಕ್ನಿಷಿಯನ್ಸ್ಗಳಿಂದ ಹಿಡಿದು ಶೌಚಗೃಹಗಳನ್ನು ಕ್ಲೀನ್ ಮಾಡುವವರ ತನಕ ಹಲವು ರೀತಿಯಲ್ಲಿ ಉದ್ಯೋಗಗಳನ್ನು ಅವಲಂಬಿಸಿದವರು ಮಾಲ್ಗಳಲ್ಲಿದ್ದಾರೆ. ಇವರೆಲ್ಲರ ಬದುಕಿಗೆ ಎರಗಿ ಆರ್ಥಿಕ ಸಂಕಷ್ಟಕ್ಕೂ ಸರ್ಕಾರ ಕಿವಿಗೊಡಬೇಕಿದೆ.
ಮತ್ತೆ ಆರಂಭಕ್ಕೆ ಅವಕಾಶ ನೀಡಲಿ: ರಾಜ್ಯ ಸರ್ಕಾರ ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ ಮಾಲ್ಗಳಿಗೆ ಅನ್ವಯಿಸಿಲ್ಲ. ಷರತ್ತು ವಿಧಿಸಿ, ನಿಯಮಾವಳಿ ರೂಪಿಸಿ ಮತ್ತೆ ತೆರೆಯಲು ಅವಕಾಶ ಮಾಡಿಕೊಟ್ಟರೂ ಸಾಕು. ಹೇಗೋ ಜೀವನ ನಡೆಯುತ್ತದೆ ಎನ್ನುವುದು ಮಾಲ್ಗಳಲ್ಲಿ ಅಂಗಡಿ ಇಟ್ಟುಕೊಂಡವರ ಅಹವಾಲು. ಈ ನಿಟ್ಟಿನಲ್ಲಿ ಸರ್ಕಾರ ಗಮನ ನೀಡಲಿ ಎನ್ನುವುದು ಮಾಲ್ ಮಾಲೀಕರ ಆಗ್ರಹ.