ಚಿಕ್ಕಮಗಳೂರು: ಅಡುಗೆ ಮಾಡಲು ಒಲೆಯನ್ನು ಹೂಡಿ ಹಚ್ಚಿದ ಬೆಂಕಿ ಇಡೀ ಬೆಟ್ಟವನ್ನೇ ಆಪೋಶನ ತೆಗೆದುಕೊಂಡಿರುವ ಘಟನೆ ತಾಲೂಕಿನ ದತ್ತಪೀಠದಲ್ಲಿ ನಡೆದಿದೆ. ಉರುಸ್ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ಆಗಮಿಸಿದ್ದ ಭಕ್ತರು ಅಲ್ಲಲ್ಲಿ ಒಲೆಯನ್ನು ಹೂಡಿ ಅಡುಗೆ ಮಾಡಿಕೊಳ್ಳುತ್ತಿರುವಾಗ ಏಕಾಏಕಿ ಬೆಂಕಿಯು ಶೋಲಾ ಅರಣ್ಯಕ್ಕೆ ವ್ಯಾಪಿಸಿದೆ.
ಸೋಮವಾರ ಮಧ್ಯಾಹ್ನ ಉರುಸ್ಗೆ ಬಂದಿದ್ದ ಭಕ್ತರು ದತ್ತಪೀಠದಿಂದ ಸ್ವಲ್ಪ ಮುಂದಿರುವ ಶೋಲಾ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿ ಅಡುಗೆ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಬೆಂಕಿ ಸಮೀಪದಲ್ಲಿಯೇ ಒಣಗಿದ್ದ ಹುಲ್ಲಿಗೆ ತಗುಲಿ ಇಡೀ ಬೆಟ್ಟವನ್ನೇ ಆವರಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಅಡುಗೆ ಮಾಡಲು ಹಾಕಿಕೊಂಡಿದ್ದ ಟೆಂಟ್ಗಳು ಹಾಗೂ ಅಡುಗೆ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಜತೆಗೆ ಶೋಲಾ ಅರಣ್ಯ ಪ್ರದೇಶವೂ ಬೆಂಕಿಗಾಹುತಿಯಾಗಿದೆ.
ದತ್ತಪೀಠದಲ್ಲಿ ನಡೆಯುವ ಉರುಸ್ ಹಾಗೂ ಇದೇ ಬೆಟ್ಟಗಳ ಸಾಲಿನಲ್ಲಿ ನಡೆಯುವ ಸೀತಾಳೆ ಜಾತ್ರೋತ್ಸವದ ವೇಳೆ ಯಾರು ಶೋಲಾ ಅರಣ್ಯ ಪ್ರದೇಶದಲ್ಲಿ ಅಡುಗೆ ಮಾಡಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿತ್ತು. ಜತೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರವಾಗಿ ಗಸ್ತು ತಿರುಗುತ್ತಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಿಪ್ಪಿಸಿ ಅಡುಗೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ವಿಡಿಯೋ ವೈರಲ್: ದತ್ತಪೀಠದಿಂದ ಸ್ವಲ್ಪ ಮುಂದೆ ಇರುವ ಶೋಲಾ ಅರಣ್ಯ ಪ್ರದೇಶದಲ್ಲಿ ಅಡುಗೆ ಮಾಡುವ ವೇಳೆ ಬೆಂಕಿ ಹುಲ್ಲಿಗೆ ತಗುಲಿ ಏಕಾಏಕಿ ಬೆಂಕಿ ಆವರಿಸಿಕೊಂಡಾಗ ಅಡುಗೆ ಮಾಡುತ್ತಿದ್ದವರು ತಮ್ಮ ಟೆಂಟ್ಗಳನ್ನು ಕಿತ್ತುಕೊಂಡು ಓಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಮಾರ್ಗದಲ್ಲಿ ತೆರಳುತ್ತಿರುವವರು ಮೊಬೈಲ್ನಲ್ಲಿ ವಿಡಿಯೋ ಶೂಟ್ ಮಾಡಿದ್ದಾರೆ. ಅಡುಗೆ ಮಾಡುವ ವೇಳೆ ಏಕಾಏಕಿ ಬೆಂಕಿ ಆವರಿಸಿದೆ. ಆಗ ಏನು ಮಾಡಬೇಕು ಎಂದು ತೋಚದ ಜನ ಕೂಡಲೇ ಟೆಂಟ್ಗಳನ್ನು ಕೀಳಲಾರಂಭಿಸಿದ್ದಾರೆ. ಜತೆಗೆ ತಮ್ಮ ಸಾಮಗ್ರಿಗಳೊಂದಿಗೆ ಓಡಲಾರಂಭಿಸಿದ್ದಾರೆ. ಆದರೂ ಕೆಲ ಟೆಂಟ್ಗಳು ಹಾಗೂ ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿರುವುದನ್ನು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.