ರಾಣೆಬೆನ್ನೂರ: ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ ನಗರದ ಮುನ್ಸಿಪಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ದಶಾವತಾರ ‘ರಾಣೆಬೆನ್ನೂರ ಕಾ ರಾಜಾ’ ಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆ ಸೆ. 28ರಂದು ಮಧ್ಯಾಹ್ನ 1 ಗಂಟೆಗೆ ಜರುಗಲಿದೆ.
ನಗರದ ಮುನ್ಸಿಪಲ್ ಮೈದಾನದಿಂದ ಆರಂಭವಾಗುವ ಶೋಭಾಯಾತ್ರೆ ಕುರುಬಗೇರಿ, ದುರ್ಗಾ ವೃತ್ತ, ಎಂ.ಜಿ. ರಸ್ತೆ, ದೊಡ್ಡಪೇಟೆ, ಬಸವೇಶ್ವರ ದೇವಸ್ಥಾನ, ಕುಂಬಾರ ಓಣಿ, ಓಂ ಸರ್ಕಲ್, ಸಂಗಮ್ ವೃತ್ತ, ಪೋಸ್ಟ್ ವೃತ್ತದ ಮೂಲಕ ಬಸ್ ನಿಲ್ದಾಣ ತಲುಪುವುದು. ನಂತರ ಹಳೇ ಪಿ.ಬಿ. ರಸ್ತೆ ಮೂಲಕ ಎನ್.ವಿ. ಹೋಟೆಲ್ವರೆಗೂ ಶೋಭಾಯಾತ್ರೆ ತೆರಳಲಿದೆ.
ಮೆರವಣಿಗೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸ ಯಾರೇ ಮಾಡಿದರೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಎಸ್ಪಿ ಹನುಮಂತರಾಯ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಮೆರವಣಿಗೆಯಲ್ಲಿ ಯಾವುದೇ ಘಟನೆ ನಡೆಯದಂತೆ ಬಂದೋಬಸ್ತ್ಗೆ ಕೆಎಸ್ಆರ್ಪಿ ಮೀಸಲು ಪಡೆ ನಾಲ್ಕು ತುಕಡಿಗಳು ಬಂದಿವೆ. ಐದು ಜಿಲ್ಲಾ ಸಶಸ್ತ್ರ ಪಡೆ, ಎರಡು ವಿಶೇಷ ತಂಡ, 6 ಡಿವೈಎಸ್ಪಿ, 17 ಸಿಪಿಐ, 50 ಪಿಎಸ್ಐ ಹಾಗೂ 600 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಅತೀ ಸೂಕ್ಷ ಪ್ರದೇಶ ಸೇರಿ 80 ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜತೆಗೆ ಮೆರವಣಿಗೆಯುದ್ದಕ್ಕೂ ಡ್ರೋನ್ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಮುನ್ನ ಎಚ್ಚರಿಕೆಯಾಗಿ ನಗರದ ಹೊರಭಾಗದ 5 ಕಡೆಗಳಲ್ಲಿ ಚೆಕ್ ಪೋಸ್ಟ್ ಮಾಡಲಾಗಿದೆ. ಹೊರಗಿನಿಂದ ಬರುವವರ ಮೇಲೆ ನಿಗಾವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.