ಚಿಕ್ಕೋಡಿ: ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೇಲೆ ಅಜಾನ್ ಕೂಗಿರುವ ವಿಚಾರವಾಗಿ ಕಾಂಗ್ರೆಸ್ ಮೇಲೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ಹೊರಹಾಕಿದ್ದಾರೆ. ಹೋರಾಟ ಮಾಡುತ್ತ ಡಿಸಿ ಕಛೇರಿ ಮೇಲೆ ಅಜಾನ್ ಕೂಗುವ ಧೈರ್ಯ ತೋರಿದ್ದಾನೆ. ಆ ಧೈರ್ಯದ ಹಿಂದೆ ಇರುವುದು ಕಾಂಗ್ರೆಸ್ ಪಕ್ಷ. ಎಸ್ಡಿಪಿಐ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ಮುಂದೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ಧೈರ್ಯದವನ್ನು ದೇಶದ್ರೋಹಿಗಳು ತೋರಿಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಶಾಸಕ ಕೆ.ಎಸ್.ಈಶ್ವರಪ್ಪ ಅವರು ಆಜಾನ್ ವಿಚಾರದಲ್ಲಿ ಲಘುವಾಗಿ ಮಾತನಾಡಿದ್ದಾರೆಂದು ಆರೋಪಿಸಿ ಮುಸ್ಲಿಂ ಸಂಘಟನೆಗಳು ಡಿಸಿ ಕಚೇರಿ ಎದುರು ನಡೆಸಿದ ಧರಣಿ ವೇಳೆ ಪ್ರತಿಭಟನಾಕಾರನೊಬ್ಬ ಆಜಾನ್ ಕೂಗಿದ್ದು ಇದೀಗ ವಿವಾದಕ್ಕೆ ಕಾರಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಆಜಾನ್ ಕೂಗಿದ ವ್ಯಕ್ತಿಗೆ ಎಚ್ಚರಿಕೆ ನೀಡಿ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿದೆ.
ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತಕ್ಕೆ ದಿನ ನಿಗದಿ; ಆರ್.ಅಶೋಕ್, ಸಿ.ಟಿ ರವಿ ಪ್ರೆಸೆಂಟ್ಸ್ | ಅಶ್ವಥ್ ನಾರಾಯಣ ಚಿತ್ರಕತೆ
ಪಿಎಫ್ಐ ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗುತ್ತಾ ಹಿಂದುಗಳ ಹತ್ಯೆಯಲ್ಲಿ ತೊಡಗಿಸಿಕೊಂಡಿದೆ. ಪಿಎಫ್ಐ ಬ್ಯಾನ್ ಆದ ಬಳಿಕ ಅದರ ಕಾರ್ಯಕರ್ತರು ಎಸ್ಡಿಪಿಐ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಪಿಎಫ್ಐ ದೇಶದ್ರೋಹಿಗಳನ್ನು ಹೊರ ಬಿಡಲಾಯಿತು. ಅಂತಹ ವ್ಯಕ್ತಿಗಳೇ ಇಂದು ಡಿಸಿ ಕಛೇರಿ ಮುಂದೆ ಅಜಾನ್ ಕೂಗಿದ್ದಾರೆ. ಇದಕ್ಕೆಲ್ಲ ಕಾಂಗ್ರೇಸ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಕಾರಣ ಎಂದು ಟೀಕಿಸಿದರು.
ಕಾಂಗ್ರೆಸ್ನ ಹಿರಿಯ ನಾಯಕರು ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿಗಳು ನಿರಪರಾಧಿಗಳು ಎಂದು ಹೇಳಿದ್ದ ಹೇಳಿಕೆಯೆ ಇಂದಿನ ಘಟನೆಗೆ ಕಾರಣ. ಡಿಸಿ ಕಛೇರಿ ಹಾಗೂ ವಿಧಾನಸೌದ ಮೇಲೆ ಅಜಾನ್ ಕೂಗುವ ಈ ಪಾಪದ ಕೆಲಸದ ಹಿಂದೆ ಕಾಂಗ್ರೆಸ್ನ ನಾಯಕರು ಇದ್ದಾರೆ. ದೇಶದ ಕೀರ್ತಿಗೆ ಮಸಿ ಬಳೆಯುವ ಕೆಲಸ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಶೋಭಾ ಕರಂದ್ಲಾಜೆ ಕಿಡಿಕಾರಿದರು.