ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಪಿಡುಗು ಜೋರಾಗಿದ್ದು, ಪ್ರತಿದಿನವೂ ಸಹಸ್ರಾರು ಸಂಖ್ಯೆಯಲ್ಲಿ ಕರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಪಿಡುಗನ್ನು ತಡೆಗಟ್ಟಲು ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಹರಸಾಹಸ ಪಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಠಾಕ್ರೆ ಅವರ ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಆರೋಪಿಸಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಸಂಜಯ್ ರಾವತ್ ಈ ಆರೋಪ ಮಾಡಿದ್ದಾರೆ. ಈ ಪತ್ರಿಕೆಯ ಸಂಪಾದಕರೂ ಆಗಿರುವ ಅವರು, ಠಾಕ್ರೆ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಭಾರಿ ಹುನ್ನಾರ ನಡೆಸಿದೆ ಎಂದು ದೂರಿದ್ದಾರೆ.
ಮಹಾರಾಷ್ಟ್ರದ ವಿಧಾನಪರಿಷತ್ನಲ್ಲಿ 12 ಸ್ಥಾನಗಳು ತೆರವಾಗಲಿವೆ. ಈ ಸ್ಥಾನಗಳಿಗೆ ಬಿಜೆಪಿ ಅವರನ್ನೇ ತುಂಬುವ ಸಲುವಾಗಿ ಈ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಅಧಿಕಾರ ಉಳಿಸಿಕೊಳ್ಳಲು ಪಕ್ಷ ಒಡೆಯುವುದೊಂದೇ ದಾರಿ ನೇಪಾಳ ಪ್ರಧಾನಿ ಓಲಿಗೆ…!
ಮಹಾರಾಷ್ಟ್ರದ ರಾಜಭವನವನ್ನು ಕೇಂದ್ರ ಗೃಹ ಸಚಿವಾಲಯ ನೇರವಾಗಿ ನಿಯಂತ್ರಿಸುತ್ತಿದೆ. ಪೂರ್ಣ ಬಹುಮತ ಇಲ್ಲದಿದ್ದರೂ ದೇವೇಂದ್ರ ಫಡ್ನವಿಸ್ ಅವರನ್ನು ಸಿಎಂ ಆಗಿ ಮತ್ತು ಅಜಿತ್ ಪವಾರ್ ಅವರನ್ನು ಡಿಸಿಎಂ ಆಗಿ ಪ್ರಮಾಣವಚನ ಬೋಧಿಸಲು ಇದೇ ಸಚಿವಾಲಯ ರಾಜ್ಯಪಾಲರ ಮೇಲೆ ಒತ್ತಡ ಹೇರಿತ್ತು. ಇದೀಗ ಇದೇ ಸಚಿವಾಲಯ ಠಾಕ್ರೆ ಅವರ ಸರ್ಕಾರಕ್ಕೆ ತೊಂದರೆಯುಂಟು ಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಪರಿಷತ್ನಲ್ಲಿ ತೆರವಾಗಿರುವ 12 ಸ್ಥಾನಗಳು ರಾಜ್ಯಪಾಲರ ಕೋಟಾಕ್ಕೆ ಸೇರಿದ್ದಾಗಿವೆ. ಕಲೆ, ಸಾಹಿತ್ಯ ಮತ್ತು ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಔನತ್ಯ ಮೆರೆದವರನ್ನು ಈ ಸ್ಥಾನಗಳಿಗೆ ಆಯ್ಕೆ ಮಾಡಬೇಕಾಗುತ್ತಿದೆ. ಇದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಷಯವಾಗಿರುತ್ತದೆ. ಆದರೆ, ಈ ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯಪಾಲರು ಅಸಡ್ಡೆ ತೋರುತ್ತಿದ್ದಾರೆ. ಈ ಸ್ಥಾನಗಳಿಗೆ ಅಕ್ಟೋಬರ್ನಲ್ಲಿ ಆಯ್ಕೆ ಮಾಡುವುದಾಗಿ ಹೇಳುತ್ತಿದ್ದಾರೆ. ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಗಡಿ ಸರ್ಕಾರವನ್ನು ಬೀಳಿಸಿದ ಬಳಿಕ ಈ ಸ್ಥಾನಗಳನ್ನು ತುಂಬಲು ಹುನ್ನಾರ ನಡೆದಿದೆ. ಆದರೆ, ಸರ್ಕಾರವನ್ನು ಬೀಳಿಸಿ, ಬಿಜೆಪಿ ಸರ್ಕಾರ ರಚಿಸುತ್ತೇವೆ ಎನ್ನುವುದು ಅವರ ಹಗಲಗನಸಾಗಿದೆ ಎಂದು ಹೇಳಿದ್ದಾರೆ.
ಈ ರಾಜ್ಯದಲ್ಲಿ ಮಾಸ್ಕ್ ಧರಿಸದೇ ಇದ್ದರೆ ಬೀಳುತ್ತೆ 10 ಸಾವಿರ ರೂಪಾಯಿ ಜುಲ್ಮಾನೆ