ಶಿವಮೊಗ್ಗ: ಸಿಂಥೆಟಿಕ್ ಟ್ರ್ಯಾಕ್ ನೆಪವೊಡ್ಡಿ ನೆಹರೂ ಒಳಾಂಗಣ ಕ್ರೀಡಾಂಗಣವನ್ನು ಕ್ರೀಡಾಪಟುಗಳಿಗೆ ನೀಡುತ್ತಿಲ್ಲ. ಒಳಾಂಗಣ ಕ್ರೀಡಾಂಗಣದಲ್ಲಿ ಎಲ್ಲ ಕ್ರೀಡಾ ಚಟುವಟಿಕೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ವಿನೋದ್ ನೇತೃತ್ವದಲ್ಲಿ ಬುಧವಾರ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಒಳಾಂಗಣ ಕ್ರೀಡಾಂಗಣದ ಬೈಲಾದಂತೆ ಒಳಾಂಗಣ ಕ್ರೀಡಾಂಗಣವನ್ನು ಬಹು ಬಳಕೆಗಾಗಿ ನಿರ್ಮಿಸಲಾಗಿದೆ. ಆದರೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು, ಶಟಲ್ ಕೋರ್ಟ್ಗೆ ಸಿಂಥೆಟಿಕ್ ಅಳವಡಿಸಲಾಗುತ್ತಿದೆ. ಬಳಿಕ ಇಲ್ಲಿ ಇತರೆ ಕ್ರೀಡಾ ಚಟುವಟಿಕೆ ನಡೆಸಲು ಸಾಧ್ಯವಿಲ ಎಂದು ಹೇಳುತ್ತಿರುವುದು ಆಶ್ಚರ್ಯ ಮೂಡಿಸಿದೆ ಎಂದು ವಿನೋದ್ ತಿಳಿಸಿದರು.
ನಗರ ಪಾಲಿಕೆಯಿಂದ ನಡೆಯುವ ದಸರಾ ಕ್ರೀಡಾಕೂಟ, ಮುಂದಿನ ತಿಂಗಳು ಹಮ್ಮಿಕೊಂಡಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕರಾಟೆ ಕ್ರೀಡಾಕೂಟಗಳನ್ನು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲು ಸಾಧ್ಯವಾಗುವುದಿಲ್ಲ. ನಗರದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣವಿದೆ ಎಂಬ ಕಾರಣಕ್ಕೆ ಅನೇಕ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ. ಆದರೆ ಅಧಿಕಾರಿಗಳು ಬೇರೆ ಸ್ಥಳ ನೋಡಿಕೊಳ್ಳಿ ಎಂದು ಹೇಳುತ್ತಿರುವುದು ಆಶ್ಚರ್ಯ ಮೂಡಿಸಿದೆ ಎಂದರು.
ಒಳಾಂಗಣ ಕ್ರೀಡಾಂಗಣ ಲಭ್ಯವಾಗದೇ ಇದ್ದರೆ ಕಲ್ಯಾಣ ಮಂದಿರಗಳಲ್ಲಿ ಕರಾಟೆ ಸ್ಪರ್ಧೆ ಏರ್ಪಡಿಸಬೇಕಾಗುತ್ತದೆ. ಇದು ಆರ್ಥಿಕವಾಗಿ ಹೊರೆಯಾಗಲಿದೆ. ಒಂದು ವೇಳೆ ಒಳಾಂಗಣ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿದರೂ ಅದರ ಮೇಲೆ ಪ್ರತ್ಯೇಕ ಮ್ಯಾಟ್ ಹಾಕಿಕೊಂಡು ಕ್ರೀಡಾಕೂಟ ನಡೆಸಬಹುದು. ಇದರಿಂದ ಸಿಂಥೆಟಿಕ್ ಟ್ರಾೃಕ್ಗೆ ಹಾನಿಯಾಗುವುದಿಲ್ಲ. ಒಳಾಂಗಣ ಕ್ರೀಡಾಂಗಣದಲ್ಲಿ ಕರಾಟೆ ಮತ್ತಿತರ ಕ್ರೀಡಾಕೂಟಕ್ಕೂ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.