ಶಿವಮೊಗ್ಗ: ನಗರದ ಹೊರವಲಯದ ಕಿಮ್ಮನೆ ರೇಸಾರ್ಟ್ನ ವಸತಿ ಗೃಹಗಳ ಹಿಂಬದಿ ಪತ್ತೆಯಾಗಿದ್ದ ಮಹಿಳೆಯ ಸಾವಿನ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದ್ದು ಕೇವಲ 2 ಸಾವಿರ ರೂ. ಗಾಗಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆ ಕರ್ಕ ಗ್ರಾಮದ ಜೋಗಿಂದರ್ (40) ಬಂಧಿತ ಆರೋಪಿ. ಕಳೆದ 2022ರ ನ.13ರಂದು ಮಲ್ಲೀಗೆನಹಳ್ಳಿಯ ಸಾವಿತ್ರಿ ಅಲಿಯಾಸ್ ಮೂಕಮ್ಮ (45) ಎಂಬುರನ್ನು ಕೊಲೆ ಮಾಡಿ ತವರಿಗೆ ಪರಾರಿಯಾಗಿದ್ದ.
ನ.14ರಂದು ಬೆಳಗ್ಗೆ ಸಾವಿತ್ರಿಯ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಸಾವಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಸಾವಿತ್ರಿ ಅವರ ಸಹೋದರ ರಮೇಶ್ ಅವರು ನೀಡಿದ ದೂರಿನ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಸಾಬೀತು
ಸಾವಿತ್ರಿ ಮೃತದೇಹದ ಗಮನಿಸಿದಾ ಪೊಲೀಸರಿಗೆ ಕೊಲೆ ಅನುಮಾನ ಮೂಡಿತ್ತು. ಮರಣೋತ್ತರ ವರದಿಯಲ್ಲಿ ಮೃತಳ ಗಂಟಲಿನಲ್ಲಿ ಕೆಸರು ಮಿಶ್ರಿತ ನೀರು ಸೇರಿರುವುದು ಮತ್ತು ಬಲಗೆನ್ನೆಯ ಮೇಲೆ ಒತ್ತಿದ ಗಾಯಗಳಾಗಿರುವುದು ತಿಳಿದು ಬಂದಿತ್ತ. ಮೃತದೇಹ ಪತ್ತೆಯಾದ 2ರಿಂದ 3 ಇಂಚು ದೂರದಲ್ಲೇ ಕೆಸರು ಮಿಶ್ರಿತ ನೀರಿನ ಝರಿ ಹರಿಯುತ್ತಿತ್ತು. ಇದೇ ಅನುಮಾನದ ಮೇಲೆ ತನಿಖೆ ಕೈಗೊಂಡಾಗ ಸಾವಿತ್ರಿಯನ್ನು ಕೊಲೆ ಮಾಡಲಾಗಿತ್ತು ಎಂಬುದು ದೃಢಪಟ್ಟಿದೆ.
ಜೋಗೀಂದರ್ ಟೈಲ್ಸ್ ಕಾರ್ಮಿಕ, ಸಾವಿತ್ರಿ ಸ್ವೀಪರ್
2022ರ ಅಕ್ಟೋಬರ್ನಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿದ್ದ ಕಟ್ಟಡದಲ್ಲಿ ಆರೋಪಿ ಜೋಗಿಂದರ್ ಟೈಲ್ಸ್ ಕೆಲಸ ಮಾಡುತ್ತಿದ್ದ. ರೇಸಾರ್ಟ್ನ ಹೋಟೆಲ್ನಲ್ಲಿ ಸಾವಿತ್ರಿ ಸ್ವೀಪರ್ ಆಗಿದ್ದರು. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಕೊಲೆ ಮಾಡಿದ ಬಳಿಕ ಜೋಗಿಂದರ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ರೇಸಾರ್ಟ್ನಿಂದಲೇ ಪರಾರಿಯಾಗಿದ್ದ.
ರೈಲಲ್ಲಿ ಹೋಗಿ, ವಿಮಾನದಲ್ಲಿ ಕರೆ ತಂದ್ರು !
ನ.13ರಂದು ಸಂಜೆ ಸಾವಿತ್ರಿಯನ್ನು ಕೊಲೆ ಮಾಡಿದ್ದ ಆರೋಪಿ ಅದೇ ದಿನ ಹಿಂಬದಿ ಕಂಪೌಂಡ್ ಹಾರಿ ಉತ್ತರ ಪ್ರದೇಶದ ಕರ್ಕ ಗ್ರಾಮಕ್ಕೆ ತೆರಳಿದ್ದ. ಈತನ ಮೇಲೆ ಅನುಮಾನ ಇದ್ದ ಕಾರಣ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರಿಂದ ಅನುಮತಿ ಪತ್ರ ಪಡೆದು ಸಬ್ಇನ್ಸ್ಪೆಕ್ಟರ್ ವಿ.ಶಿವಪ್ರಸಾದ್ ನೇತೃತ್ವದಲ್ಲಿ ಹೆಡ್ಕಾನ್ಸ್ಟೇಬಲ್ ಕೃಷ್ಣಮೂರ್ತಿ, ಕಾನ್ಸ್ಟೇಬಲ್ಗಳಾದ ಲಂಕೇಶ್ಕುಮಾರ್, ಕಾಂತರಾಜ, ಪ್ರಶಾಂತ್ ಅವರ ತಂಡ ಉತ್ತರ ಪ್ರದೇಶಕ್ಕೆ ರೈಲು ಮಾರ್ಗವಾಗಿ ತೆರಳಿತ್ತು. ಜ.7ರಂದು ಕರ್ಕ ಗ್ರಾಮದಲ್ಲಿ ಜೋಗಿಂದರ್ನನ್ನು ಪತ್ತೆ ಮಾಡಿದ್ದು ಸಾವಿನ ಪ್ರಕರಣದ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿ ರಸ್ತೆ ಮಾರ್ಗವಾಗಿ ಲಕ್ನೋಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ವಿಮಾನದಲ್ಲಿ ಕರೆತಂದಿದ್ದರು. ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಜ.8ರಂದು ತುಂಗಾನಗರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾನೆ.