ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನೂರಾರು ರೈತರಿಗೆ ಸಾಗುವಳಿಪತ್ರ ಕೊಡಿಸಲು ಹಾಗೂ ಬಡವರಿಗೆ ಆಶ್ರಯ ಮನೆಗಳನ್ನು ನೀಡುವಲ್ಲಿ ಶಾಸಕ ಕೆ.ಬಿ.ಅಶೋಕ್ನಾಯ್ಕ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜೆಡಿಎಸ್ ಗ್ರಾಮಾಂತರ ವಿಭಾಗದ ಅಧ್ಯಕ್ಷ ಸೋಮಿನಕೊಪ್ಪ ಕಾಂತರಾಜ್ ಆರೋಪಿಸಿದರು.
ಗ್ರಾಪಂಗಳಲ್ಲಿ ಹೊಸದಾಗಿ ಆಡಳಿತ ಅಸ್ತಿತ್ವಕ್ಕೆ ಬಂದು ನಾಲ್ಕೈದು ತಿಂಗಳು ಕಳೆದರೂ ಬಸವ ವಸತಿ, ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ಒಂದೇ ಒಂದು ಮನೆ ಕೊಟ್ಟಿಲ್ಲ. ಅರಣ್ಯ ಹಕ್ಕು ಸಮಿತಿಯಲ್ಲಿ ಹಲವು ಷರತ್ತುಗಳಿದ್ದು ಅವುಗಳನ್ನು ಸರಿಪಡಿಸುವ ಕೆಲಸವನ್ನು ಶಾಸಕರು ಮಾಡಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಹೊಳಲೂರು ಏತ ನೀರಾವರಿ ಯೋಜನೆಗೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕಾ ಅವರ ಇಚ್ಛಾಶಕ್ತಿಯಿಂದ 8.5 ಕೋಟಿ ರೂ. ಬಿಡುಗಡೆಯಾಗಿತ್ತು. ಹೊಳಲೂರಿನಿಂದ ಆಲದಹಳ್ಳಿವರೆಗೆ ಕಾಮಗಾರಿ ಪೂರ್ಣಗೊಂಡು ನೀರು ಹರಿಯುತ್ತಿದೆ. ಇದು ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಬಿಡುಗಡೆ ಮಾಡಿದ ಅನುದಾನದಿಂದ ಆಗಿದೆಯೇ ಹೊರತು ಇದರಲ್ಲಿ ಶಾಸಕರ ಶ್ರಮವಿಲ್ಲ ಎಂದು ಹೇಳಿದರು.
ಕಾರ್ಮಿಕ ಇಲಾಖೆಯಿಂದ ಗ್ರಾಮಾಂತರ ಭಾಗದ ಕಾರ್ಮಿಕರಿಗೆ ಹಂಚಲು ನೀಡಿದ್ದ ಆಹಾರ ಕಿಟ್ಗಳು ಬಿಜೆಪಿ ಬೂತ್ಮಟ್ಟದ ಕಾರ್ಯಕರ್ತರ ಮನೆ ಸೇರಿವೆ. ನಿಜವಾದ ಕಾರ್ಮಿಕರಿಗೆ ಕಿಟ್ಗಳು ಸಿಕ್ಕಿಲ್ಲ ಎಂದು ಆರೋಪಿಸಿದರು. ತಮ್ಮಡಿಹಳ್ಳಿ ಗ್ರಾಪಂ ಸದಸ್ಯ ಪ್ರಕಾಶ್, ಉಮೇಶ್ ಇದ್ದರು.