ಶಿವಮೊಗ್ಗ: ಜಿಲ್ಲೆಯಲ್ಲಿ ಸಮಸ್ತ ಪ್ರಜೆಗಳು ಶಾಂತಿ ಹಾಗೂ ಸಮಾನತೆಯ ಬದುಕುವ ನಿಟ್ಟಿನಲ್ಲಿ ರಾಷ್ಟ್ರಕ್ಕೆ ಅಪಮಾನವಾಗುವಂತಹ ಯಾವುದೇ ಕೃತ್ಯಗಳು ನಡೆಯದಂತೆ ಸೂಕ್ತ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಗಡಿ ಭದ್ರತಾ ಪಡೆಯ ಮಾಜಿ ಸೈನಿಕ ಎಸ್.ಮಂಜುನಾಥ್ ಇಂದು ಏಕಾಂಗಿಯಾಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಶಿವಮೊಗ್ಗದಲ್ಲಿ ನಡೆದ ಘಟನೆ ಒಂದು ದೊಡ್ಡ ಕಪ್ಪುಚುಕ್ಕೆ ತಂದಿದೆ. ಕೆಲ ಸಮಾಜಘಾತಕ ಶಕ್ತಿಗಳು ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸುವುದು, ಅವಾಚ್ಯ ಶಬ್ದಗಳ ಬಳಕೆ ಮತ್ತು ಅವರ ಭಾವಚಿತ್ರವನ್ನು ಅವಮಾನಿಸುವುದು ರಾಷ್ಟ್ರದ್ರೋಹಕ್ಕೆ ಸಮಾನ ಎಂದು ದೂರಿದರು.
ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ಅರ್ಪಿಸಿದ, ಜಾತಿ, ಧರ್ಮ, ಬೇಧ ಮರೆತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರು ಮತ್ತು ಯೋಧರನ್ನು ಅವಮಾನಿಸುವುದು ನಿಲ್ಲಿಸಬೇಕು. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭಾರತೀಯರು ನಾವೆಲ್ಲರೂ ಒಂದು ಎಂದು ಭಾವಿಸಿ ಹೆಜ್ಜೆ ಹಾಕಬೇಕು ಮತ್ತು ದುಷ್ಟಶಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಶೇಖರಪ್ಪ, ಅಬ್ದುಲ್ ರಜಾಕ್, ಶಿವಾನಂದ್, ಶಶಿಕುಮಾರ್, ಎಚ್.ಅವಿನಾಶ್ ಇದ್ದರು.