ಶಿವಮೊಗ್ಗ: ಅಯೋಧ್ಯೆ ರಾಮ ಮಂದಿರ ನಿರ್ವಣಕ್ಕೆ ಜಿಲ್ಲೆಯಲ್ಲಿ ನಿಧಿ ಸಮರ್ಪಣಾ ಅಭಿಯಾನ ಆರಂಭವಾಗಿದೆ. ಸಂಘ ಪರಿವಾರ, ಬಿಜೆಪಿ ಪ್ರಮುಖರು ಮನೆ ಮನೆಗಳಿಗೆ ತೆರಳಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಬೀಡಿ ಕಂಪನಿ ಮಾಲೀಕ ಮುಜೀಬ್ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ ಟ್ರಸ್ಟ್ಗೆ 1,01,001 ರೂ. ಚೆಕ್ ನೀಡಿ ಗಮನ ಸೆಳೆದರು.
ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಜಿಪಂ ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಪ್ರತಿಪಕ್ಷ ನಾಯಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಮುಖಂಡರಾದ ಗಿರೀಶ್ ಪಟೇಲ್, ಕೆ.ವಿ.ಅಣ್ಣಪ್ಪ, ಆರ್ಎಸ್ಎಸ್ ಪ್ರಮುಖರಾದ ಪಟ್ಟಾಭಿರಾಮ್ ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದ್ದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪ್ರತಿ ಮನೆಯಿಂದ ಮಂದಿರ ನಿರ್ವಣಕ್ಕೆ ನಿಧಿ ಸಂಗ್ರಹಿಸಲಾಗುತ್ತಿದೆ. ಕನಿಷ್ಠ 10 ರೂ.ನಿಂದ ಎಷ್ಟು ಬೇಕಾದರೂ ದೇಣಿಗೆ ನೀಡಬಹುದು ಎಂದು ತಿಳಿಸಿದರು.
ನಗರದ ಜಿಎಸ್ಕೆಎಂ ರಸ್ತೆಯ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಆರ್ಎಸ್ಎಸ್ ಪ್ರಾಂತ ಬೌದ್ಧಿಕ ಪ್ರಮುಖ್ ದಿನೇಶ್ ಪೈ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು. ಪಾಲಿಕೆ ಸದಸ್ಯೆ ಸುನಿತಾ ಅಣ್ಣಪ್ಪ, ಬಿ.ಎಸ್.ಕಾಮತ್, ಕೆ.ವಿ.ಅಣ್ಣಪ್ಪ ಇದ್ದರು.
ನಗರದ 13ನೇ ವಾರ್ಡ್ ಪೆನ್ಷನ್ ಮೊಹಲ್ಲಾ 1ನೇ ತಿರುವಿನಲ್ಲಿ ಆರಾಧನಾ ಸಮಿತಿ ಅಧ್ಯಕ್ಷ ಬಿ.ಆರ್.ಮಧುಸೂದನ್, ಪಾಲಿಕೆ ಸದಸ್ಯ ಪ್ರಭಾಕರ್, ಪ್ರಮುಖರಾದ ಬಾಲಚಂದ್ರ, ದೇವರಾಜ್, ಜಯಮ್ಮ, ಅಣ್ಣಪೂರ್ಣ, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.