ಬೆಂಗಳೂರು: ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್ ಅವರು ಶರಣ್ ಅಭಿನಯದ ಹೊಸ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ನ್ನು ಇಂದು ಬೆಳಿಗ್ಗೆ ಬಿಡುಗಡೆ ಮಾಡುತ್ತಾರೆ ಎಂಬ ಸುದ್ದಿ ಕೇಳಿದ್ದು ನೆನಪಿದೆ ತಾನೇ. ಈಗ ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಗುರುಶಿಷ್ಯರು’ ಎಂಬ ಹೆಸರನ್ನು ಇಡಲಾಗಿದೆ.
ಇದನ್ನೂ ಓದಿ: ರೈ ನಾನೇ ಮಾಡುತ್ತೇನೆ; ‘ಎಂಆರ್’ ಚಿತ್ರ ಕೈಬಿಡುವಂತೆ ಪದ್ಮನಾಭ್ ಆಗ್ರಹ
‘ಗುರುಶಿಷ್ಯರು’ ಎಂಬುದು ದ್ವಾರಕೀಶ್ ನಿರ್ಮಾಣದ ಜನಪ್ರಿಯ ಚಿತ್ರದ ಹೆಸರು. ಡಾ. ವಿಷ್ಣುವರ್ಧನ್, ಮಂಜುಳಾ, ದ್ವಾರಕೀಶ್ ಮುಂತಾದವರು ಅಭಿನಯಿಸಿದ್ದ ಈ ಚಿತ್ರವನ್ನು ಹಿರಿಯ ನಿರ್ದೇಶಕ ಭಾರ್ಗವ ನಿರ್ದೇಶನ ಮಾಡಿದ್ದು, ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಈಗ ಆ ಚಿತ್ರದ ಹೆಸರನ್ನು ಶರಣ್ ಅಭಿನಯದ ಚಿತ್ರಕ್ಕೆ ಇಡಲಾಗಿದೆ ಎನ್ನುವುದು ವಿಶೇಷ.
ಟೈಟಲ್ ಏನೋ ಹಳೇದು, ಕಥೆ ಹೊಸದು ತಾನೇ? ಇಂಥದ್ದೊಂದು ಪ್ರಶ್ನೆ ಬಂದಿದ್ದು ಪ್ರೇಕ್ಷಕರಿಗಲ್ಲ. ಖುದ್ದು ಶರಣ್ಗೆ ಬಂದಿದೆ. ಟೈಟಲ್ ಮೋಷನ್ ಪೋಸ್ಟರ್ನ ಕೊನೆಯಲ್ಲಿ ಅವರು ತರುಣ್ ಸುಧೀರ್ಗೆ ಇಂಥದ್ದೊಂದು ಪ್ರಶ್ನೆ ಕೇಳುತ್ತಾರೆ. ಈ ಪ್ರಶ್ನೆ ಕೇಳಿ ತರುಣ್ ಗಾಬರಿಯಾಗುತ್ತಾರೆ. ಈಗಾಗಲೇ ಈ ಟೈಟಲ್ ಮೋಷನ್ ಪೋಸ್ಟರ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಬಗ್ಗೆ ಆಗಲೇ ಕುತೂಹಲ ಮೂಡಿದೆ.
ಶರಣ್ ಅಭಿನಯದ ಈ ಚಿತ್ರವನ್ನು ಜಡೇಶ್ ಹಂಪಿ ನಿರ್ದೇಶನ ಮಾಡಿದರೆ, ತರುಣ್ ಕಿಶೋರ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ತರುಣ್ ಸುಧೀರ್ ಈ ಚಿತ್ರವನ್ನು ತಮ್ಮ ತರುಣ್ ಸುಧೀರ್ ಕ್ರಿಯೇಟಿವ್ಸ್ ಎಂಬ ಸಂಸ್ಥೆಯ ಮೂಲಕ ಸಹ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ತಮಿಳಿಗೆ ಸತೀಶ್ ನೀನಾಸಂ; ನಾಡೋಡಿಗಳ್ ಶಶಿಕುಮಾರ್ ಜತೆ ನಟನೆ
‘ಗುರು ಶಿಷ್ಯರು’ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದು, ಸುಧಾಕರ್ ರಾಜ್ ಛಾಯಾಗ್ರಹಣ ಮಾಡಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಜನವರಿಯಿಂದ ಪ್ರಾರಂಭವಾಗುವ ಸಾಧ್ಯತೆ ಇದೆ.