ಮುಂಬೈ: ದೆಹಲಿ ಚುನಾವಣೆಯಲ್ಲಿ ಸೋತ ಬಿಜೆಪಿಯ ಬಗ್ಗೆ ಎನ್ಸಿಪಿ ಹಿರಿಯ ನಾಯಕ, ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ವ್ಯಂಗ್ಯವಾಡಿದ್ದಾರೆ.
ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶ ವಿರೋಧಿಗಳಿಗೆ ಮತ ಹಾಕಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉಳಿದ ಬಿಜೆಪಿ ನಾಯಕರು ದೆಹಲಿಯ ಜನರ ಬಳಿ ಚುನಾವಣಾ ಪ್ರಚಾರದ ವೇಳೆ ಮನವಿ ಮಾಡಿದ್ದರು. ಮತದಾರರು ಕೂಡ ಹಾಗೇ ನಡೆದುಕೊಂಡಿದ್ದಾರೆ. ದೇಶ ವಿರೋಧಿಗಳನ್ನು ಗೆಲ್ಲಿಸಬಾರದು ಎಂದು ಆಪ್ಗೆ ಮತ ಹಾಕಿ ಗೆಲ್ಲಿಸಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯ ದ್ವೇಷ ರಾಜಕಾರಣದಿಂದ ಜನರು ಬೇಸತ್ತಿದ್ದಾರೆ. ಆಪ್ನ ಹಲವು ಮುಖಂಡರು, ಎಂಎಲ್ಎ ಗಳನ್ನು ಕಾನೂನಾತ್ಮಕವಾಗಿ ಸಿಕ್ಕಿಸಲು ಬಿಜೆಪಿ ಪ್ರಯತ್ನ ಮಾಡಿತು. ಏನೇನೋ ಹೋರಾಟ ನಡೆಸಿತು. ಆದರೆ ಕೊನೆಯಲ್ಲಿ ಯಾವುದೂ ಕೆಲಸ ಮಾಡಲಿಲ್ಲ ಎಂದು ಹೇಳಿದರು.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ಎನ್ಸಿಪಿ ನಿರ್ಧಾರ ಮಾಡಿದೆ. ಹಾಗೇ ಕಾಂಗ್ರೆಸ್ ಕೂಡ ಈ ಬಗ್ಗೆ ಯೋಚಿಸಬೇಕು. ಇದರಿಂದ ಭವಿಷ್ಯದ ಚುನಾವಣೆಗಳಲ್ಲಿ ಮತ ವಿಭಜನೆ ಆಗುವುದು ತಪ್ಪುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. (ಏಜೆನ್ಸೀಸ್)