ಚೆನ್ನೈ: ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ವಿಳಂಬವಾಗುತ್ತಿರುವುದಕ್ಕೆ ನಿರ್ದೇಶಕ ಶಂಕರ್ ವಿರುದ್ಧ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್ ಕೋರ್ಟ್ ಏರಿರುವುದು ಈಗಾಗಲೇ ಸುದ್ದಿಯಾಗಿದೆ. ಅಷ್ಟೇ ಅಲ್ಲ, ಇಂಡಿಯನ್ 2 ಚಿತ್ರವನ್ನು ಮುಗಿಸದೇ ಶಂಕರ್ ಬೇರೆ ಯಾವ ಚಿತ್ರವನ್ನೂ ಕೈಗೆತ್ತಿಕೊಳ್ಳಬಾರದು ಎಂದು ಲೈಕಾ ಪ್ರೊಡಕ್ಷನ್ಸ್ ಮನವಿ ಮಾಡಿದೆ.
ಇದನ್ನೂ ಓದಿ: ನನಗೆ ಸಾಮಾನ್ಯ ಮನುಷ್ಯನಾಗಿರೋಕೇ ಇಷ್ಟ ಅಂತ ಸೋನು ಹೇಳಿದ್ದೇಕೆ?
ಈ ನಿಟ್ಟಿನಲ್ಲಿ ಲೈಕಾ ಪ್ರೊಡಕ್ಷನ್ಸ್ ಮತ್ತು ಶಂಕರ್ ಪರಸ್ಪರ ಸೌಹಾರ್ದಯುತವಾಗಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು ಎಂದು ನ್ಯಾಯಾಲಯವು ತಾಕೀತು ಮಾಡುವುದರ ಜತೆಗೆ ಒಂದಿಷ್ಟು ಸಮಯವನ್ನು ನೀಡಿತ್ತು. ಇದಕ್ಕೆ ಉತ್ತರಿಸಿರುವ ಶಂಕರ್, ಚಿತ್ರ ತಡವಾಗುವುದಕ್ಕೆ ನಾಯಕ ಕಮಲ್ ಹಾಸನ್ ಸಹ ಒಂದು ಕಾರಣ ಎಂದು ಶಂಕರ್ ಹೇಳಿದ್ದಾರೆ.
ಇಂಡಿಯನ್ 2 ಚಿತ್ರ ವಿಳಂಬವಾಗುವುದಕ್ಕೆ ಕಮಲ್ ಹೇಗೆ ಕಾರಣ ಎಂಬ ಪ್ರಶ್ನೆ ಬರಬಹುದು. ವಿಷಯವೇನೆಂದರೆ, ಕಮಲ್ ಹಾಸನ್ ಅವರಿಗೆ ಮೇಕಪ್ ಹಾಕಿದಾಗ, ಅಲರ್ಜಿಯಾಗಿತ್ತಂತೆ. ಇದರಿಂದ ಸ್ವಲ್ಪ ಸಮಯ ಚಿತ್ರೀಕರಣ ನಿಲ್ಲಿಸಲಾಗಿದೆ. ಆ ನಂತರ ಸೆಟ್ನಲ್ಲಿ ದುರ್ಘಟನೆ ನಡೆದು ಮೂವರು ಕಾರ್ಮಿಕರು ಸತ್ತ ಹಿನ್ನೆಲೆಯಲ್ಲಿ ಇನ್ನಷ್ಟು ವಿಳಂಬವಾಗಿದೆ. ಆ ನಂತರ ಲಾಕ್ಡೌನ್, ತಮಿಳುನಾಡು ಚುನಾವಣೆ ಅಂತೆಲ್ಲ ಎದುರಾಗಿದ್ದರಿಂದ ಚಿತ್ರ ಸಹಜವಾಗಿಯೇ ವಿಳಂಬವಾಗಿದ್ದು, ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಶಂಕರ್ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ತಾವು ಚಿತ್ರೀಕರಣವನ್ನು ಮುಗಿಸಿಕೊಡುವುದಕ್ಕೂ ಸಿದ್ಧರಾಗಿರುವುದಾಗಿ ಅವರು ಹೇಳಿದ್ದಾರೆ.
ಅದಕ್ಕೆ ಸರಿಯಾಗಿ, ಇಂಡಿಯನ್ 2 ಚಿತ್ರವನ್ನು ಶಂಕರ್, ಜುಲೈ ಒಳಗೆ ಮುಗಿಸಿಕೊಡಬೇಕು ಎಂದು ಲೈಕಾ ಪ್ರೊಡಕ್ಷನ್ಸ್ ಹೇಳಿದರೆ, ಅಷ್ಟು ತರಾತುರಿಯಲ್ಲಿ ಚಿತ್ರ ಮುಗಿಸುವುದಕ್ಕೆ ಸಾಧ್ಯವಿಲ್ಲವಾದ್ದರಿಂದ, ಅಕ್ಟೋಬರ್ ಒಳಗೆ ಚಿತ್ರ ಮುಗಿಸಿಕೊಡುವುದಾಗಿ ಶಂಕರ್ ಹೇಳಿದ್ದಾರೆ. ಹಿರಿಯ ನಟ ವಿವೇಕ್ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರ ಭಾಗದ ಚಿತ್ರೀಕರಣವನ್ನು ಮತ್ತೊಮ್ಮೆ ರೀಶೂಟ್ ಮಾಡಬೇಕಿರುವುದರಿಂದ, ಶಂಕರ್ ಇನ್ನೊಂದಿಷ್ಟು ಸಮಯವನ್ನು ಕೇಳಿದ್ದಾರೆ.
ಇದನ್ನೂ ಓದಿ: ಸಲ್ಮಾನ್, ಚಿತ್ರಮಂದಿರದವರ ಕ್ಷಮೆ ಕೇಳಿದ್ದು ಯಾಕೆ?
ಇದಕ್ಕೆ ಪ್ರತಿಯಾಗಿ, ಲೈಕಾ ಪ್ರೊಡಕ್ಷನ್ಸ್ನವರು ಇನ್ನೇನು ಹೇಳುತ್ತಾರೋ, ಪ್ರಕರಣ ಯಾವ ತಿರುವು ಪಡೆಯುತ್ತದೋ ಮತ್ತು ಬಹುನಿರೀಕ್ಷೆಯ ಇಂಡಿಯನ್ 2 ಚಿತ್ರವು ಯಾವಾಗ ಬಿಡುಗಡೆಯಾಗುತ್ತದೋ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಬಿಗ್ಬಾಸ್ ಮನೆಯಿಂದ ಅರ್ಧಕ್ಕೆ ಎಲಿಮಿನೇಟ್ ಆದ ಬಗ್ಗೆ ಕೊನೆಗೂ ಶಾಕಿಂಗ್ ಹೇಳಿಕೆ ನೀಡಿದ ರಾಜೀವ್!