ದಾವಣಗೆರೆ: ಯಾರು ಏನೇ ಹೇಳಲಿ.., ವಾಸ್ತವ ಅಂಶಗಳಿಂದ ದೂರವಿರುವ ಜಾತಿ ಗಣತಿ ವರದಿ ಒಪ್ಪಲು ಸಾಧ್ಯವೇ ಇಲ್ಲ ಎಂದು ಹಿರಿಯ ಕಾಂಗ್ರೆಸಿಗ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಗುರುವಾರ ಮತ್ತೊಮ್ಮೆ ಗುಡುಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕರಿಸುತ್ತಿದ್ದಂತೆ ಮೊದಲ ಪ್ರತಿಕ್ರಿಯೆ ನೀಡಿರುವ ಶಾಮನೂರು, ವರದಿ ತಯಾರಿಕೆಗೆ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿಲ್ಲ. ಮನೆ-ಮನೆಗೆ ಭೇಟಿ ನೀಡಿಲ್ಲ, ಸರ್ಕಾರದ ಕೈ ಸೇರುವ ಮುನ್ನವೇ ಸೋರಿಕೆಯಾಗಿದೆ ಎಂದು ಕಿಡಿಕಾರಿದ್ದಾರೆ.
1990ರ ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ ಶೇ. 17 ರಷ್ಟಿದ್ದ ವೀರಶೈವ ಲಿಂಗಾಯತರ ಪ್ರಮಾಣ 33 ವರ್ಷಗಳ ಬಳಿಕ ಏರಿಕೆ ಕಾಣುವ ಬದಲು ಶೇ. 10.68 ಕ್ಕೆ ಕುಸಿದಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಸಮುದಾಯದ ಜನಸಂಖ್ಯೆ 2 ಕೋಟಿಗೂ ಅಧಿಕವಿದೆ ಎಂದು ಪುನರುಚ್ಛರಿಸಿದ್ದಾರೆ.
ಇದನ್ನೂ ಓದಿ: ಪರೀಕ್ಷೆಗೆ ಒಂದು ನಿಮಿಷ ತಡವಾಗಿದ್ದಕ್ಕೆ ಒಳ ಬಿಡದ ಸಿಬ್ಬಂದಿ; ಮನನೊಂದು ಪ್ರಾಣಬಿಟ್ಟ ವಿದ್ಯಾರ್ಥಿ
ಜಾತಿಗಣತಿ ಸಮೀಕ್ಷೆ ವೇಳೆ ಸಾಕಷ್ಟು ಲೋಪ-ದೋಷಗಳಾಗಿವೆ. ಹೀಗಾಗಿ ವೈಜ್ಞಾನಿಕ ಮರು ಗಣತಿ ನಡೆಸಬೇಕು ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನ ವೇಳೆ ಜಾತಿ ಗಣತಿ ವಿರೋಧಿಸಿ ನಿರ್ಣಯ ಅಂಗೀಕರಿಸಲಾಗಿದೆ. ಅದಕ್ಕೂ ಮುನ್ನ ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಇದೀಗ ವರದಿ ಸ್ವೀಕರಿಸಿರುವ ಸರ್ಕಾರ ಮುಂದೇನು ಮಾಡುತ್ತದೆ ನೋಡೋಣ. ವೀರಶೈವ ಲಿಂಗಾಯತ ಸಮಾಜದ ಹಿತ ಕಾಯಲು ಮಹಾಸಭಾ ಬದ್ಧವಿದೆ. ಇದಕ್ಕೆ ಪೂರಕವಾಗಿ ಯಾವ ರೀತಿ ಹೋರಾಟ ರೂಪಿಸಬೇಕು ಎಂಬುದರ ಬಗ್ಗೆ ಚರ್ಚಿಸುತ್ತೇವೆ. ವೀರಶೈವ-ಲಿಂಗಾಯತ ಧರ್ಮ ವಿಭಜಿಸಲು ಹೋಗಿ ಕೈ ಸುಟ್ಟುಕೊಂಡ ಉದಾಹರಣೆ ಇದ್ದರೂ ಜಾತಿ ಗಣತಿ ವಿಷಯದಲ್ಲೂ ಮತ್ತದೇ ತಪ್ಪು ಪುನರಾವರ್ತನೆ ಮಾಡದಂತೆ ಈ ಹಿಂದೆ ಎಚ್ಚರಿಸಲಾಗಿದೆ ಎಂದು ಮಹಾಸಭಾದ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಪುನರುಚ್ಛರಿಸಿದ್ದಾರೆ.