ಬೆಂಗಳೂರು: ಅಕ್ರಮವಾಗಿ ಹಣ ಸಂಪಾದನೆ ಮಾಡುವ ಹಟಕ್ಕೆ ಇಳಿದವರು ಯಾವ ಮಟ್ಟಕ್ಕೆ ಬೇಕಾದರೂ ಹೋಗ್ತಾರೆ. ಕೊಲೆ, ಸುಲಿಗೆ, ಬೆದರಿಕೆ, ಹಲ್ಲೆ… ಇನ್ನೂ ಮುಂದುವರಿದು ಲೈಂಗಿಕ ದೌರ್ಜನ್ಯದಂತಹ ಹೀನ ಕೃತ್ಯಕ್ಕೂ ಕೈ ಹಾಕಲು ಹಿಂದೆ ಮುಂದೆ ನೋಡುವುದಿಲ್ಲ.
ಅಕ್ರಮವಾಗಿ ಗುತ್ತಿಗೆ ಬಿಲ್ಗಳನ್ನು ಪಾಸ್ ಮಾಡಿಸಿಕೊಳ್ಳುವ ದುರುದ್ದೇಶದಿಂದ ಮೂವರು ಗುತ್ತಿಗೆದಾರರು ಬಿಬಿಎಂಪಿ ಲೆಕ್ಕಾಧೀಕ್ಷಕಿಯೊಬ್ಬರ ಪೋಟೋಗಳನ್ನು ಅಹಸ್ಯಕರವಾಗಿ ತಿರುಚಿ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿರಿ ಐವರ ಕೊಲೆಗೆ ಕಾರಣವಾಯ್ತು ಒಂದು ಲವ್ ಸ್ಟೋರಿ!
ಬಿಬಿಎಂಪಿ ಗುತ್ತಿಗೆದಾರರಾದ ಗಿರೀಶ್, ಪ್ರಮೋದ್ ಮತ್ತು ಅಜಯ್ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಫ್ರೇಜರ್ಟೌನ್ ನಿವಾಸಿ 37 ವರ್ಷದ ಬಿಬಿಎಂಪಿ ಲೆಕ್ಕಾಧೀಕ್ಷಕಿ ದೂರು ದಾಖಲಿಸಿದ್ದಾರೆ.
ದೂರುದಾರ ಮಹಿಳೆ ಕೆಲ ವರ್ಷಗಳಿಂದ ಬಿಬಿಎಂಪಿ ಲೆಕ್ಕಾಧೀಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಈ ವೇಳೆ ಗಿರೀಶ್, ಪ್ರಮೋದ್, ಅಜಯ್ ಅವರ ಪರಿಚಯವಾಗಿತ್ತು. ಆರೋಪಿಗಳು ಕೆಲಸದ ನಿಮಿತ್ತ ಆಗಾಗ ದೂರುದಾರರ ಕಚೇರಿಗೆ ಬಂದು ಹೋಗುತ್ತಿದ್ದರು. ಒಳ್ಳೆಯ ಸ್ನೇಹಿತರಂತೆ ಮಾತನಾಡಿ ಲೆಕ್ಕಾಧೀಕ್ಷಕಿ ಜತೆ ಮೊಬೈಲ್ನಲ್ಲಿ ಫೋಟೋಗಳನ್ನು ತೆಗೆದುಕೊಂಡಿದ್ದರು.
ಬಿಬಿಎಂಪಿ ಗುತ್ತಿಗೆಗೆ ಸಂಬಂಧಿಸಿದ ಹಲವಾರು ಬಿಲ್ಲುಗಳನ್ನು ನಗದೀಕರಿಸಿಕೊಂಡು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರ ಇಎಸ್ಐ, ಪಿಎಸ್, ಜಿಎಸ್ಟಿ ಪಾವತಿ ಮಾಡುವುದಿಲ್ಲ ಎಂದಿದ್ದಲ್ಲದೇ ಗುತ್ತಿಗೆ ಬಿಲ್ಗಳನ್ನು ಪಾಸ್ ಮಾಡದಿದ್ದರೆ ನಿಮ್ಮ ಜತೆಯಲ್ಲಿ ಈ ಹಿಂದೆ ತೆಗೆದ ಪೋಟೊಗಳನ್ನು ಅಹಸ್ಯಕರವಾಗಿ ಮಾರ್ಪಡಿಸುವುದಾಗಿ ಬೆದರಿಕೆ ಒಡ್ಡಿದ್ದರು.
ಇದಾದ ಕೆಲ ಸಮಯದ ನಂತರ ಆರೋಪಿ ಗಿರೀಶ್ಗೂ ತನಗೂ ಅಕ್ರಮ ಸಂಬಂಧವಿದೆ ಎಂಬ ರೀತಿಯಲ್ಲಿ ಪೋಟೊಗಳನ್ನು ಮಾರ್ಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣಬೆದರಿಕೆ ಹಾಕಿದ್ದಾರೆ. ಜತೆಗೆ ಮೊಬೈಲ್ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾರೆ.
ಈ ಫೋಟೋಗಳನ್ನು ಬಳಸಿಕೊಂಡು ಅಕ್ರಮ ಸಂಬಂಧದ ಕಥೆಕಟ್ಟಿ ಕಚೇರಿಯಲ್ಲಿ ಕೆಲಸ ನಿರ್ವಹಿಸದಂತೆ ಮಾಡುತ್ತೇವೆ ಎಂಬುದಾಗಿ ಬೆದರಿಸಿದ್ದಾರೆ. ಗುತ್ತಿಗೆ ಬಿಲ್ಲುಗಳನ್ನು ಅಕ್ರಮವಾಗಿ ನಗದೀಕರಣ ಮಾಡಿಕೊಳ್ಳುವ ದುರುದ್ದೇಶದಿಂದ ಲೈಂಗಿಕ ಕಿರುಕುಳ ನೀಡಿ ಮಾನಸಿಕವಾಗಿ ಒತ್ತಡ ಹೇರಿದ್ದಾರೆ ಎಂದು ಲೆಕ್ಕಾಧೀಕ್ಷಕಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಪ್ರಕರಣದ ತನಿಖೆ ಆರಂಭಿಸಿದ್ದು, ಸಂಬಂಧಿಸಿದ ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಮಾಧಿಯಲ್ಲಿ ಕೊಳೆಯುತ್ತಿದ್ದ ಕರ್ನಾಟಕ ಮೂಲದ ಮಗು ಶವ ತೆಗೆಸಿ ಬೇರೆಡೆಗೆ ದೂಡಿದ್ರು…