ಸೀತಾಪುರ: ಉತ್ತರ ಪ್ರದೇಶದ ಸೀತಾಪುರದಲ್ಲಿರುವ ರಾಸಾಯನಿಕ ಕಾರ್ಖಾನೆಯೊಂದರಿಂದ ಹೊರಸೂಸಲ್ಪಟ್ಟ ವಿಷಪೂರಿತ ಅನಿಲದಿಂದ ಮೂವರು ಮಕ್ಕಳು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.
ಗುರುವಾರ ಬಿಸ್ವಾನ್ನಲ್ಲಿರುವ ಕಾರ್ಖಾನೆಯಿಂದ ಹೊರಹೋಗುವ ಪೈಪ್ಲೈನ್ನಿಂದ ಅನಿಲ ಸೋರಿಕೆಯಾಗಿದ್ದು, ಈ ವೇಳೆ ಕಾರ್ಖಾನೆಯಲ್ಲಿ ಮಲಗಿದ್ದವರು ಉಸಿರುಕಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕಾರ್ಪೆಟ್ ಫ್ಯಾಕ್ಟರಿಯಿಂದ ಅನಿಲ ಸೋರಿಕೆಯಾಗುತ್ತಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಕಾರ್ಖಾನೆ ಪ್ರವೇಶ ಮಾಡುವುದೇ ಕಷ್ಟವಾಗುವಷ್ಟು ವಾಸನೆ ಭರಿತ ಅನಿಲ ಹೊರಹೊಮ್ಮುತ್ತಿತ್ತು. ಬಳಿಕ ಮೂವರು ಮಕ್ಕಳು ಸೇರಿ ಏಳುಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲೇ ಪಕ್ಕದಲ್ಲಿರುವ ಇನ್ನೊಂದು ಕಾರ್ಖಾನೆಯಿಂದಲೂ ಅನಿಲ ಸೋರಿಕೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಅವರು ಮೃತರ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಜಿಲ್ಲಾಡಳಿತ ಮತ್ತು ಪೊಲೀಸರಿಂದ ವರದಿ ಕೇಳಿದ್ದಾರೆ. ಜಿಲ್ಲಾಡಳಿತದಿಂದ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. (ಏಜೆನ್ಸೀಸ್)