ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ ಡಾಲಿ ಧನಂಜಯ ಅವರ ಹೊಸ ಸಿನಿಮಾ ರತ್ನನ್ ಪ್ರಪಂಚಕ್ಕೆ ಸರಳ ಮುಹೂರ್ತ ನೆರವೇರಿದೆ. ಸೋಮವಾರ ಇಡೀ ತಂಡ ಒಂದೆಡೆ ಸೇರಿ ಮುಹೂರ್ತ ಮುಗಿಸಿಕೊಂಡಿದ್ದು, ರಾಜಕುಮಾರ್ ಖ್ಯಾತಿಯ ನಿರ್ದೇಶಕ ಸಂತೋಷ್ ಆನಂದ್ರಾಮ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ: ಡಾಲಿ ಧನಂಜಯ ‘ಬಡವ ರಾಸ್ಕಲ್’ ಸಿನಿಮಾ ಎಲ್ಲಿಗೆ ಬಂತು…
ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಕಲಾವಿದರಾದ ರವಿಶಂಕರ್ ಗೌಡ, ಪ್ರಮೋದ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಹ ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು.
ಸದ್ಯ ಮುಹೂರ್ತ ಮುಗಿಸಿಕೊಂಡಿರುವ ಚಿತ್ರತಂಡ, ಇನ್ನೆರಡು ವಾರಗಳ ಬಳಿಕ ಮೈಸೂರಿನಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲು ಯೋಜನೆ ಹಾಕಿದ್ದಾರೆ. ಅದಾದ ಬಳಿಕ ಉತ್ತರ ಕರ್ನಾಟಕ, ಅದು ಮುಗಿಯುತ್ತಿದ್ದಂತೆ ಉತ್ತರ ಭಾರತದತ್ತ ಪ್ರಯಾಣ ಬೆಳೆಸಲಿದೆ ತಂಡ.
ಇದನ್ನೂ ಓದಿ: ಸುಶಾಂತ್ ಮರಣೋತ್ತರ ಪರೀಕ್ಷೆ ವೇಳೆ ರಿಯಾ ಹಾಜರಿ; ಆಸ್ಪತ್ರೆಯ ನಡೆ ಖಂಡಿಸಿ ನೋಟಿಸ್ ಜಾರಿ
ಈಗಾಗಲೇ ಈ ಚಿತ್ರಕ್ಕೆ ರೆಬಾ ಮೋನಿಕಾ ನಾಯಕಿಯಾಗಿ ಆಯ್ಕೆಯಾಗಿದ್ದು, ವಿಶೇಷ ಎಂಬಂತೆ ಹಿರಿಯ ನಟಿ ಉಮಾಶ್ರೀ ಈ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ನಿರ್ದೇಶಕ ರೋಹಿತ್ ಪದಕಿ ಅಧಿಕೃತ ಮಾಡಿದ್ದಾರೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.