ನವದೆಹಲಿ: ಅತ್ಯಾಚಾರ ಹಾಗೂ ದೇಣಿಗೆ ಸಂಗ್ರಹಕ್ಕೆ ಮಕ್ಕಳನ್ನು ಬಳಸಿಕೊಂಡಿರುವ ಕೇಸಿನಲ್ಲಿ ಬಂಧನದ ಭೀತಿಯಿಂದ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಪತ್ತೆಗೆ ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಬಿಡದಿಯಲ್ಲಿರುವ ಆಶ್ರಮಕ್ಕೆ ದೇಣಿಗೆ ಸಂಗ್ರಹಿಸಲು ಮಕ್ಕಳನ್ನು ಅಪಹರಣ ಮಾಡಿ ಅವರನ್ನು ಬಳಸಿಕೊಂಡಿದ್ದ. ಅಲ್ಲದೆ ಅಹಮದಾಬಾದ್ನ ಆಶ್ರಮದಲ್ಲಿ ಇಬ್ಬರು ಬಾಲಕಿರು ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿದ್ದರು.
ಬಿಡದಿ ಬಳಿಯ ಆಶ್ರಮದಲ್ಲಿ ಆತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಬಿಡದಿ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಗೆ ನಿತ್ಯಾನಂದ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಆತನ ಬಂಧನಕ್ಕೆ ವಾರೆಂಟ್ ಜಾರಿ ಮಾಡಿತ್ತು. ಹೀಗಾಗಿ ಆತ ಪಾಸ್ಪೋರ್ಟ್ ಇಲ್ಲದೆ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ.
ಕಳೆದ ವರ್ಷ ಈಕ್ವೆಡಾರ್ ರಾಯಭಾರ ಕಚೇರಿ ನಿತ್ಯಾನಂದನಿಗೆ ಆಶ್ರಯ ನೀಡಿದೆ. ಅಲ್ಲದೆ ಆತ ದಕ್ಷಿಣ ಅಮೆರಿಕದಲ್ಲಿ ದ್ವೀಪ ಖರೀದಿಸಲು ಈಕ್ವೆಡಾರ್ ರಾಯಭಾರ ಕಚೇರಿ ಸಹಾಯ ಮಾಡಿದೆ ಎಂಬ ವರದಿಗಳು ಬಂದಿದ್ದವು. ಆದರೆ ಭಾರತದ ವಿದೇಶಾಂಗ ಸಚಿವಾಲಯ ಈವರದಿಗಳನ್ನು ತಳ್ಳಿ ಹಾಕಿತ್ತು.
ತಲೆ ಮರೆಸಿಕೊಂಡಿರುವ ಸ್ವಘೋಷಿತ ದೇವಮಾನವ ನಿತ್ಯಾನಂದಸ್ವಾಮಿ ಪತ್ತೆಗೆ ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. (ಏಜೆನ್ಸೀಸ್)