ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ ವಾಹನಗಳ ಶೀಘ್ರ ವಿಲೇವಾರಿಗೆ ಹೈಕೋರ್ಟ್ ಸೂಚನೆ ನೀಡಿದೆ. ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ, ಬಾಂಡ್ ಪಡೆದುಕೊಂಡು ವಾಹನಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸೂಚನೆ ನೀಡಿದೆ. ಧನತೇಜಾ ಎಂಬುವವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ವೇಳೆ ನ್ಯಾಯಾಲಯದಿಂದ ಆದೇಶ ಹೊರಬಿದ್ದಿದೆ.
‘ಅನಗತ್ಯವಾಗಿ ಠಾಣೆಗಳ ಮುಂದೆ ವಾಹನಗಳನ್ನು ನಿಲ್ಲಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ, ಇದರ ಬದಲಾಗಿ ಬಾಂಡ್ ಪಡೆದು ತ್ವರಿತವಾಗಿ ವಿಲೇವಾರಿ ಮಾಡಬೇಕು..’ ಎಂದು ಹೈಕೋರ್ಟ್ ಹೇಳಿದೆ.
ನಗರದ ಪೊಲೀಸ್ ಠಾಣೆಗಳಲ್ಲಿ ಸಾವಿರಾರು ವಾಹನಗಳು ಬಿಡುಗಡೆಯಾಗದೆ ಪೊಲೀಸ್ ಠಾಣೆಗಳ ಸುಪರ್ದಿಯಲ್ಲೇ ಇವೆ. ಇದರಿಂದ ಸಾರ್ವಜನಿಕರಿಗೂ ಕಿರಿಕಿರಿ, ಪೊಲೀಸ್ ಸಿಬ್ಬಂದಿಗಳಿಗೂ ತೊಂದರೆ ಆಗುತ್ತಿತ್ತು. ಹಲವೆಡೆ ಟ್ರಾಫಿಕ್ ಸಮಸ್ಯೆಯೂ ಎದುರಾಗುತ್ತಿತ್ತು. ಈಗ ಹೈಕೋರ್ಟ್ ಸೂಚನೆಯಿಂದ ಜನರಿಗೆ ಆಗುತ್ತಿದ್ದ ಅನಗತ್ಯ ತೊಂದರೆಗೆ ಫುಲ್ಸ್ಟಾಪ್ ಬಿದ್ದಿದೆ.