ತಿರುವನಂತಪುರಂ: ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಲಕ್ಷದ್ವೀಪ ಮೂಲದ ನಟಿ-ರೂಪದರ್ಶಿ ಆಯಿಷಾ ಸುಲ್ತಾನ ಅವರಿಗೆ ಕೇರಳ ಹೈಕೋರ್ಟ್ ಇಂದು ನಿರೀಕ್ಷಣಾ ಜಾಮೀನು ನೀಡಿದೆ.
ಆಯಿಷಾ ವಿರುದ್ಧ ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಅಬ್ದುಲ್ ಖಾದರ್ ಅವರು ನೀಡಿರುವ ದೂರಿನ ಮೇಲೆ ಕವರತ್ತಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 124 ಎ ಅಡಿಯಲ್ಲಿ (ದೇಶದ್ರೋಹ) ಮತ್ತು 153 ಬಿ ಅಡಿಯಲ್ಲಿ (ದ್ವೇಷ ಭಾಷಣ) ಪ್ರಕರಣ ದಾಖಲಾಗಿದೆ. ಮಲಯಾಳಂ ಟಿವಿ ಚಾನೆಲ್ನಲ್ಲಿ ಪ್ರಸಾರವಾದ ಚರ್ಚಾ ಕಾರ್ಯಕ್ರಮದ ವೇಳೆ, ಲಕ್ಷದ್ವೀಪದಲ್ಲಿ ಕರೊನಾ ಹರಡಿಸಲು ಕೇಂದ್ರ ಸರ್ಕಾರ ಜೈವಿಕ ಅಸ್ತ್ರ ಬಳಸಿದೆ ಎಂದು ಆಯಿಷಾ ಗಂಭೀರ ಆರೋಪ ಮಾಡಿದ್ದು, ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಲಸಿಕೆಗೆ ಒತ್ತಾಯಿಸುವುದು, ಸೌಲಭ್ಯ ಕಟ್ ಎನ್ನುವ ಬೆದರಿಕೆ ಹಾಕುವುದು ಕಾನೂನುಬಾಹಿರ ಎಂದ ಹೈಕೋರ್ಟ್
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವು ನಾನ್ಬೇಲಬಲ್ ಆಗಿರುವುದರಿಂದ ನಿರೀಕ್ಷಣಾ ಜಾಮೀನು ಕೋರಿ ಜೂನ್ 14 ರಂದು ಕೇರಳ ಹೈಕೋರ್ಟ್ನಲ್ಲಿ ಆಯಿಷಾ ಅರ್ಜಿ ಸಲ್ಲಸಿದ್ದರು. ತಮ್ಮ ಮಾತುಗಳು ಯಾವುದೇ ದುರುದ್ದೇಶದಿಂದ ಕೂಡಿರಲಿಲ್ಲ. ತಮಗೆ ತೊಂದರೆ ಕೊಡುವ ಉದ್ದೇಶದಿಂದ ದೂರು ದಾಖಲಿಸಲಾಗಿದೆ ಎಂದು ಆಯಿಷಾ ಹೇಳಿದ್ದರು. (ಏಜೆನ್ಸೀಸ್)