ಮಂಗಳೂರು: ನಿನ್ನೆ ಕಾಟಿಪಳ್ಳದಲ್ಲಿ ನಡೆದ ಜಲೀಲ್ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ನಗರದಾದ್ಯಂತ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನದರದಲ್ಲಿ ಸೆಕ್ಷನ್ 144 ಜಾರಿಯಾಗಿದೆ.
ಜಲೀಲ್ ಮನೆ ಬಳಿ ಸಾರ್ವಜನಿಕರು ಮೃತದೇಹದ ಇಟ್ಟು ಪ್ರತಿಭಟನೆ ನಡೆಸಿದ್ದು ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವ ಗಡುವು ನೀಡಿದ್ದಾರೆ. ಕೊನೆಗೂ ಸಾರ್ವಜನಿಕರ ಮನವೊಲಿಸಿ ಜಲೀಲ್ ಮೃತದೇಹವನ್ನು ದಫನಕ್ಕಾಗಿ ಮಸೀದಿಗೆ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಾಲ್ಕು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ.
ಪೂರ್ವನಿಯೋಜಿತ ಕಾರ್ಯಕ್ರಮಗಳಿಗೆ ಇದರಿಂದ ವಿನಾಯತಿ ನೀಡಲಾಗಿದ್ದು ಎರಡು ದಿನಗಳ ಕಾಲ ಸುರತ್ಕಲ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಮಂಗಳೂರು ಪೋಲಿಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
‘ಇದೀಗ ಆರೋಪಿಗಳ ಪತ್ತೆಗೆ ಎಂಟು ಅಧಿಕಾರಿಗಳಿರುವ ತಂಡ ರಚಿಸಲಾಗಿದ್ದು ಆದಷ್ಟು ಬೇಗ ನೈಜ ಆರೋಪಿಗಳನ್ನು ಬಂಧಿಸಲಾಗುವುದು. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು. ಹತ್ಯೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು’ ಎಂದು ಮಂಗಳೂರು ಪೋಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.