ನವದೆಹಲಿ: ಅಕ್ರಮವಾಗಿ ಹಣ ಸಂಗ್ರಹಿಸಿ ವಂಚಿಸಿದ ಆರೋಪಕ್ಕೆ ಗುರಿಯಾಗಿರುವ ಪರ್ಲ್ಸ್ ಆಗ್ರೋಟೆಕ್ ಕಾರ್ಪೊರೇಷನ್ ಲಿಮಿಟೆಡ್(ಪಿಎಸಿಎಲ್)ನ ಪ್ರಾಪರ್ಟಿ ವ್ಯವಹಾರಕ್ಕೆ ಮುಂದಾಗುವ ಹೂಡಿಕೆದಾರರು ಜಾಗರೂಕರಾಗಿರಬೇಕು ಎಂದು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಎಚ್ಚರಿಸಿದೆ.
ಕಳೆದ 18 ವರ್ಷಗಳ ಅವಧಿಯಲ್ಲಿ ಪಿಎಸಿಎಲ್ 60,000 ಕೋಟಿ ರೂಪಾಯಿಯನ್ನು ಕಲೆಕ್ಟಿವ್ ಇನ್ವೆಸ್ಟ್ಮೆಂಟ್ ಸ್ಕೀಮ್ ಮೂಲಕ ಸಂಗ್ರಹಿಸಿದೆ. ಕೃಷಿ ಮತ್ತು ರಿಯಲ್ಎಸ್ಟೇಟ್ ಉದ್ಯಮದ ಹೆಸರಿನಲ್ಲಿ ಈ ಕಂಪನಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದೆ.ಈಗ ಈ ಕಂಪನಿಯ ಪಾಲುದಾರರು ಕಂಪನಿಗೆ ಸೇರಿದ ಆಸ್ತಿಯನ್ನು ಮಾರಾಟಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ದೂರುಗಳು ಕೇಳತೊಡಗಿವೆ.
ಪಿಎಸಿಎಲ್ ಆಸ್ತಿ ಖರೀದಿಗೆ ಆಸಕ್ತಿ ತೋರುತ್ತಿರುವ ಹೂಡಿಕೆದಾರರನ್ನು ಎಚ್ಚರಿಸುವ ಸಲುವಾಗಿ ಸೆಬಿ ಹೊಸದಾಗಿ ಜಾಗೃತಿ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಪಿಎಸಿಎಲ್ ಅಥವಾ ಅದಕ್ಕೆ ಸಂಬಂಧಿಸಿದ ಸೋದರ ಸಂಸ್ಥೆಗಳ ಆಸ್ತಿ ಖರೀದಿಗೆ ಮುಂದಾದರೆ ಯಾವುದೇ ಕಷ್ಟನಷ್ಟಕ್ಕೆ ವ್ಯವಹಾರ ಮಾಡಿಕೊಂಡವರೇ ಹೊಣೆಯಾಗಿರುತ್ತಾರೆ ಎಂಬ ಸಂದೇಶವನ್ನು ಅದು ರವಾನಿಸಿದೆ. ಈ ಪ್ರಕಟಣೆಯ ಪ್ರತಿ ಸೆಬಿಯ ವೆಬ್ಸೈಟ್ನಲ್ಲಿ ಲಭ್ಯವಿದೆ.
ಪಿಎಸಿಎಲ್ನ ಆಸ್ತಿ ಪರಾಬಾರೆಗೆ ನಿವೃತ್ತಿ ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದ ಸಮಿತಿ ರಚನೆಯಾಗಿದೆ. ಇದರೊಂದಿಗೆ ನಡೆಸುವ ವ್ಯವಹಾರ ಮಾತ್ರವೇ ಸಿಂಧುವಾಗುತ್ತದೆ ಎಂದೂ ಸೆಬಿ ಸ್ಪಷ್ಟಪಡಿಸಿದೆ.ಇದುವರೆಗೆ 3.81 ಲಕ್ಷ ಹೂಡಿಕೆದಾರರು 5,000 ರೂಪಾಯಿ ತನಕ ಹಣ ಕ್ಲೇಮ್ ಮಾಡಿದ್ದಾರೆ. ಖಾತೆಗೆ ಸಂಬಂಧಿಸಿದ ದೋಷಗಳಿರುವ ಹೂಡಿಕೆದಾರರ ಹಣವನ್ನು ಪಾವತಿಸಲಾಗಿಲ್ಲ. (ಏಜೆನ್ಸೀಸ್)