ಗುಜರಾತ್ನ ರಂಗಭೂಮಿ ಪ್ರತಿಭೆ, ಗುಜರಾತಿ ಚಿತ್ರರಂಗದ ಸ್ಟಾರ್ ನಟ, ಸದ್ಯ ಬಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಲಾವಿದ ಪ್ರತೀಕ್ಗಾಂಧಿ. ಹನ್ಸಲ್ ಮೆಹ್ತಾ ನಿರ್ದೇಶನದ “ಸ್ಕ್ಯಾಮ್ 1992′ ವೆಬ್ಸರಣಿಯ ಮೂಲಕ ಮನೆಮಾತಾದ ಪ್ರತೀಕ್ ಇದೀಗ ಹಿಂದಿ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ, ಸರಣಿಗಳಲ್ಲಿ ಮಿಂಚುತ್ತಿದ್ದಾರೆ. ಅದೇ ಖುಷಿಯಲ್ಲಿ ಇತ್ತೀಚೆಗಷ್ಟೆ ಅವರು ವಿಜಯವಾಣಿ ಜತೆ ಮಾತುಕತೆಗೆ ಸಿಕ್ಕಿದ್ದರು.
| ಹರ್ಷವರ್ಧನ್ ಬ್ಯಾಡನೂರು
“ಸ್ಕ್ಯಾಮ್ …’ ಇಮೇಜ್ನಿಂದ ಹೊರಬರಬೇಕಿತ್ತು
2020ರಲ್ಲಿ ರಿಲೀಸ್ ಆದ ಹನ್ಸಲ್ ಮೆಹ್ತಾ ನಿರ್ದೇಶನದ “ಸ್ಕ್ಯಾಮ್ 1992′ ಸರಣಿಯಲ್ಲಿ ಪ್ರತೀಕ್ ಗಾಂಧಿ ಹರ್ಷದ್ ಮೆಹ್ತಾ ಪಾತ್ರದಲ್ಲಿ ನಟಿಸಿದ್ದರು. ಆ ಸರಣಿ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತ್ತು. “”ಸ್ಕ್ಯಾಮ್ 1992′ ಸರಣಿಯ ಹರ್ಷದ್ ಮೆಹ್ತಾ ಇಮೇಜ್ನಿಂದ ಹೊರಬರಲು ಪ್ರಯತ್ನಿಸುತ್ತಿದ್ದೆ. ಹೊಸ ರೀತಿಯ ಪಾತ್ರದಲ್ಲಿ ನಟಿಸಿ, ಪ್ರೇಕ್ಷಕರಿಗೆ ಹೊಸದನ್ನೇನೋ ನೀಡಬೇಕು ಅಂತಿದ್ದೆ. ರೊಮ್ಯಾಂಟಿಕ್ ಕಾಮಿಡಿ ಮಾಡಬೇಕು ಅಂದುಕೊಂಡಿದ್ದ ಸಮಯದಲ್ಲಿ ಸಿಕ್ಕ ಚಿತ್ರ “ದೋ ಔರ್ ದೋ ಪ್ಯಾರ್’. ಈ ಕಥೆಯಲ್ಲಿ ಜೋಡಿಗಳು ಪರಿಸ್ಥಿತಿಗಳನ್ನು ನಾನು ಇದುವರೆಗೂ ಯಾವುದೇ ಸಿನಿಮಾದಲ್ಲಿ ನೋಡಿಲ್ಲ, ಎಲ್ಲಿಯೂ ಓದಿಲ್ಲ ಕೂಡ’ ಎಂದು ಮಾಹಿತಿ ನೀಡುತ್ತಾರೆ.
ವಿದ್ಯಾ ಬಾಲನ್ ಜತೆ ನಟಿಸಿದ ಅನುಭವ
“ವಿದ್ಯಾ ಬಾಲನ್ ಎಲ್ಲರೂ ಇಷ್ಟಪಡುವ ಸ್ಟಾರ್’ ಎನ್ನುವ ಪ್ರತೀಕ್, “ನಾನು ಅವರ ನಟನೆಯ ಅಭಿಮಾನಿ. ಅವರ ಜತೆ ಕೆಲಸ ಮಾಡುವುದು ತುಂಬ ಈಜಿ. ನಿಜ ಜೀವನದಲ್ಲೂ ಸರಳವಾಗಿರುತ್ತಾರೆ. ಅವರ ಇಂತಹ ಗುಣಗಳಿಂದಲೇ ಅವರು ದೊಡ್ಡ ಸ್ಟಾರ್ ಆಗಿದ್ದಾರೆ. ಮೊದಲ ದಿನದ ಶೂಟಿಂಗ್ ಸಮಯದಲ್ಲೇ ಕಂರ್ಟ್ ಫೀಲ್ ಮಾಡಿಸಿದರು. ಹೀಗಾಗಿಯೇ ನಾನು, ಅವರು ಪತಿ ಮತ್ತು ಪತ್ನಿ ಪಾತ್ರಗಳಲ್ಲಿ ನಟಿಸಲು ಸಾಧ್ಯವಾಯಿತು.
ರಂಗಕರ್ಮಿಗಳಿಗೆ ಇದು ಅತ್ಯುತ್ತಮ ಸಮಯ
ಇತ್ತೀಚಿನ ದಿನಗಳಲ್ಲಿ ರಂಗಭೂಮಿ ಕಲಾವಿದರಿಗೆ ಹೆಚ್ಚು ಅವಕಾಶಗಳು ದೊರೆಯುತ್ತಿವೆ ಎನ್ನುವ ಪ್ರತೀಕ್, “ಕಲಾವಿದರಿಗೆ ಇದು ಅತ್ಯುತ್ತಮ ಸಮಯ. ರಂಗಭೂಮಿ ಕಲಾವಿದರಿಗೆ ಈಗ ಹೆಚ್ಚು ಅವಕಾಶಗಳಿವೆ. ಅದಕ್ಕೆ ಕಾರಣ ರಂಗಭೂಮಿ, ಕಲಾವಿದರಿಗೆ ಶಿಸ್ತನ್ನು ಕಲಿಸಿರುತ್ತದೆ. ಅವರ ಥಿಯೇಟರ್ ಅನುಭವ, ಪಾತ್ರವನ್ನು ಅರಿತು, ಅಭಿನಯಿಸುವ ರೀತಿ ಪ್ಲಸ್ ಆಗಿರುತ್ತದೆ. ಹಾಗಂತ ರಂಗಭೂಮಿ ಕಲಾವಿದರಷ್ಟೇ ಉತ್ತಮ ನಟರು ಅಂತ ಹೇಳುತ್ತಿಲ್ಲ. ಅವರು ಒಂದೇ ಪಾತ್ರವನ್ನು 500 ಬಾರಿ ಮಾಡಿರುತ್ತಾರೆ, ಒಂದೇ ಸಾಲನ್ನು 5000 ಬಾರಿ ಹೇಳಿರುತ್ತಾರೆ. ಹೀಗಾಗಿ ಪಾತ್ರವನ್ನು ಸರಳವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಈಗಂತೂ ಒಟಿಟಿ ಇರುವ ಕಾರಣ ಹೆಚ್ಚು ಕಲಾವಿದರ ಅವಶ್ಯಕತೆಯಂತೂ ಇದೆ. ಹೆಚ್ಚು ರಂಗಭೂಮಿ ಹಿನ್ನೆಲೆಯ ಕಲಾವಿದರು ಬರಲಿ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ’ ಎಂದು ಹೇಳಿಕೊಳ್ಳುತ್ತಾರೆ.
“ಗಾಂಧಿ’ ಮತ್ತು “ಫುಲೆ’ ಬಯೋಪಿಕ್ಗಳಿಗೆ ಸಿದ್ಧತೆ
ಪ್ರತೀಕ್ ಗಾಂಧಿ ಹನ್ಸಲ್ ಮೆಹ್ತಾ ನಿರ್ದೇಶಿಸಲಿರುವ ಮಹಾತ್ಮಾ ಗಾಂಧಿ ಜೀವನಾಧಾರಿತ ವೆಬ್ಸರಣಿಯಲ್ಲಿ ಗಾಂಧೀಜಿ ಪಾತ್ರದಲ್ಲಿ ಮತ್ತು ಮಹಾತ್ಮಾ ಫುಲೆ ಬಯೋಪಿಕ್ನಲ್ಲಿ ಫುಲೆ ಪಾತ್ರದಲ್ಲಿ ನಟಿಸಲಿದ್ದಾರೆ. ಪಾತ್ರಗಳ ಸಿದ್ಧತೆಯ ಬಗ್ಗೆ, “ಬಯೋಪಿಕ್ಗಳ ವಿಷಯದಲ್ಲಿ ಸ್ಕ್ರಿಪ್ಟ್ ಬರೆಯುವಾಗಲೇ ತುಂಬ ರೀಸರ್ಚ್ ಆಗುತ್ತದೆ. ಒಬ್ಬ ಕಲಾವಿದನಾಗಿ ನಾನು ಯಾವುದೇ ಪಾತ್ರ ಮಾಡಿದರೂ ಅದರ ಎಮೋಷನ್ಸ್ ಮತ್ತು ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು, ಪ್ರೇಕ್ಷಕರಿಗೆ ಅರ್ಥ ಮಾಡಿಸುವುದು ನನ್ನ ಜವಾಬ್ದಾರಿಯಾಗಿರುತ್ತದೆ. ಆ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ’ ಎನ್ನುತ್ತಾರೆ.
ಸೌತ್ನ ಹಾದಿಯಲ್ಲಿ ಗುಜರಾತಿ ಚಿತ್ರರಂಗ
ಗುಜರಾತಿ ಚಿತ್ರರಂಗ ವರ್ಷಂಪ್ರತಿ ಬೆಳೆಯುತ್ತಿದೆ. ಸಿನಿಮಾ ಸಂಖ್ಯೆ, ಬಜೆಟ್, ರಿಲೀಸ್ ವಿಷಯಗಳಲ್ಲೂ ಬೆಳವಣಿಗೆ ಹೊಂದುತ್ತಿದೆ. ಈ ಬಗ್ಗೆ ಪ್ರತಿಕ್, “ಗುಜರಾತಿ ಸಿನಿಮಾಗಳು ಚೆನ್ನಾಗಿ ಬರುತ್ತಿವೆ ಎಂದು ಹೇಳಿಕೊಳ್ಳಲು ಖುಷಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಬೆಳವಣಿಗೆ ನೋಡಿ, ಗುಜರಾತಿ ಚಿತ್ರರಂಗ ಕಲಿಯುತ್ತಿದೆ. ಕನ್ನಡದ “ಕಾಂತಾರ’ ಚಿತ್ರ ಉತ್ತಮ ಉದಾಹರಣೆ. ಪ್ಯಾನ್ ಇಂಡಿಯಾ ಸದ್ದು ಮಾಡಿದ ಸಿನಿಮಾ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಜನರ ಗಮನ ಸೆಳೆಯಿತು. ಈ ನಿಟ್ಟಿನಲ್ಲಿ ಗುಜರಾತಿ ಚಿತ್ರರಂಗ ಕೂಡ ಮಾರುಕಟ್ಟೆ ಮತ್ತು ಪ್ರೇಕ್ಷಕರನ್ನು ಸೃಷ್ಟಿಸಿಕೊಳ್ಳುವ ಹಾದಿಯಲ್ಲಿದೆ’ ಎಂದು ಹೇಳಿಕೊಳ್ಳುತ್ತಾರೆ.