ಕೊಪ್ಪಳ: ಲಂಬಾಣಿ, ಕೊರಚ, ಕೊರಮ, ಭೋವಿ ಸಮುದಾಯಗಳನ್ನು ಪರಿಶಿಷ್ಟ ಜಾತಿ ಮೀಸಲಾತಿ ಪಟ್ಟಿಯಿಂದ ತೆಗೆದು ಹಾಕದಂತೆ ಒತ್ತಾಯಿಸಿ ಲಂಬಾಣಿ ಸಮುದಾಯದ ಮುಖಂಡರು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆಯವ ಮೂಲಕ ಚಳವಳಿ ಆರಂಭಿಸಿದ್ದಾರೆ.
ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಜಿಲ್ಲೆಯ 36 ತಾಂಡಾಗಳಲ್ಲಿ ಏಕ ಕಾಲಕ್ಕೆ ಪತ್ರ ಚಳವಳಿ ಆರಂಭಿಸಲಾಗಿದೆ. ಲಂಬಾಣಿ, ಭೋವಿ ಸೇರಿ ಇತರ ಸಮುದಾಯಗಳನ್ನು ಪಜಾ ಮೀಸಲಾತಿಯಿಂದ ಕೈ ಬಿಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಲಾಗತ್ತಿದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಸಂದೇಶ ಕಳಿಸುವ ಮೂಲಕ ಸಮುದಾಯಗಳಲ್ಲಿ ಆತಂಕ ಮೂಡಿಸುವ ಕೆಲಸ ನಡೆಯುತ್ತಿದೆ. ಸರ್ಕಾರ ಅಂತಹ ನಿರ್ಧಾರವನ್ನು ಕೈಗೊಳ್ಳಬಾರದು. ನಾವು ಅನಾದಿ ಕಾಲದಿಂದಲೂ ಶೋಷಣೆಗೆ ಒಳಪಟ್ಟಿದ್ದೇವೆ. ಇನ್ನೂ ಸಮುದಾಯದ ಜನರು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಸಮುದಾಯ ಅಭಿವೃದ್ಧಿಗೆ ಸರ್ಕಾರ ಇನ್ನು ಹೆಚ್ಚಿನ ಆದ್ಯತೆ ನೀಡಬೇಕಿದೆ. ಯಾವುದೇ ಕಾರಣಕ್ಕೂ ಮೀಸಲು ಪಟ್ಟಿಯಿಂದ ಸಮುದಾಯವನ್ನು ಕೈ ಬಿಡಬಾರದು. ಇದಕ್ಕೆ ನಮ್ಮ ವಿರೋಧವಿದೆ ಎಂದು ಅಂಚೆ ಪತ್ರ ಮೂಲಕ ಒತ್ತಾಯಿಸಿದರು.
ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಪಿ.ಲಕ್ಷಣನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಭರತ್ ನಾಯ್ಕ, ಬಂಜಾರ ಸಮುದಾಯದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಾ ಕುಮಾರ ರಾಠೋಡ, ಜಿಲ್ಲಾ ಸಂಚಾಲಕ ಶಿವಪ್ಪ ಜಗೋ ಗೋರ್, ರಾಘವೇಂದ್ರ ಜಾಧವ, ಚಂದ್ರಕಾಂತ ನಾಯ್ಕ, ಪರಶುರಾಮ ಕಟ್ಟಿಮನಿ, ಲಿಂಗರಾಜ ಕಟ್ಟಿಮನಿ, ನಾಗರಾಜ ಮಾಳಗಿ ಸೇರಿ ಇತರರಿದ್ದರು.