ನವದೆಹಲಿ: ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ದಿನ ಹತ್ತಿರ ಬರುತ್ತಿದ್ದಂತೆ ಅಪರಾಧಿಗಳಲ್ಲಿ ಓರ್ವನಾದ ಮುಕೇಶ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ, ಹೊಸದಾಗಿ ಕ್ಯೂರೇಟಿವ್ ಮತ್ತು ಕ್ಷಮಾದಾನ ಅರ್ಜಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದ.
ಆದರೆ ಸುಪ್ರೀಂಕೋರ್ಟ್ ಅರ್ಜಿಯನ್ನು ಇಂದು ತಿರಸ್ಕರಿಸಿದೆ. ಮತ್ತೊಮ್ಮೆ ಕ್ಯುರೇಟಿವ್ ಮತ್ತು ಕ್ಷಮಾದಾನ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಹೇಳಿದೆ. ಕಾನೂನು ಪ್ರಕ್ರಿಯೆಯ ವಿಚಾರದಲ್ಲಿ ನನ್ನ ಮಾಜಿ ವಕೀಲರಾದ ವೃಂದಾ ಗ್ರೋವರ್ ಅವರು ದಾರಿ ತಪ್ಪಿಸಿದ್ದಾರೆ. ಸರಿಯಾದ ಮಾರ್ಗದರ್ಶನ ಮಾಡಲಿಲ್ಲ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ನನಗೆ ಹೊಸದಾಗಿ ಕ್ಯುರೇಟಿವ್ ಅರ್ಜಿ ಸಲ್ಲಿಸಲು, ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮುಕೇಶ್ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಒತ್ತಾಯಿಸಿದ್ದ.
ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಇದು ಪ್ರಾಮುಖ್ಯವುಳ್ಳ ಅರ್ಜಿಯಲ್ಲ ಎಂದು ಹೇಳಿದೆ. ಕಾನೂನಿನ ಅನ್ವಯ ಮರಣದಂಡನೆ ಶಿಕ್ಷೆಯ ಮರುಪರಿಶೀಲನಾ ಅರ್ಜಿ ತಿರಸ್ಕಾರಗೊಂಡ ಮೂರುವರ್ಷದವರೆಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಅಪರಾಧಿಗೆ ಅವಕಾಶ ಇರುತ್ತದೆ. ಆದರೆ ಮುಕೇಶ್ ತಮ್ಮ ಮಾಜಿ ವಕೀಲರಾದ ವೃಂದಾ ಇದನ್ನು ನನಗೆ ತಿಳಿಸಲಿಲ್ಲ. ಅವಸರದಿಂದ ಅರ್ಜಿ ಸಲ್ಲಿಸುವಂತೆ ಮಾಡಿದ್ದಾರೆ. ಹಾಗಾಗಿ ಹೊಸದಾಗಿ ಕಾನೂನು ಪ್ರಕ್ರಿಯೆ ನಡೆಸುತ್ತೇನೆ ಎಂದು ತಮ್ಮ ಈಗಿನ ವಕೀಲ ಎಂ.ಎಲ್.ಶರ್ಮಾ ಮೂಲಕ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ಗಲ್ಲುಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ 2018ರ ಜುಲೈನಲ್ಲಿ ತಿರಸ್ಕರಿಸಿತ್ತು. ಹಾಗಾಗಿ 2021ರ ಜುಲೈವರೆಗೂ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂಬುದು ಆತನ ವಾದ. (ಏಜೆನ್ಸೀಸ್)
ನಿರ್ಭಯಾ ಅತ್ಯಾಚಾರ ಅಪಾಧಿಗಳ ಗಲ್ಲಿಗೆ ದಿನಗಣನೆ; 3 ದಿನ ಮೊದಲೇ ಹಾಜರಾಗಲು ಹ್ಯಾಂಗ್ಮ್ಯಾನ್ಗೆ ಸೂಚನೆ
ಕೊರನಾ ಭೀತಿಯಿಂದ ಇಡೀ ಭಾರತಕ್ಕೆ ಬೀಗಮುದ್ರೆ ಬೀಳಲಿದೆಯಾ? ಕೇಂದ್ರ ಸರ್ಕಾರ ಹೇಳಿದ್ದೇನು?