ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಶಿವವೊಗ್ಗದ ಮಾಲ್ವೊಂದರಲ್ಲಿ ಆರಂಭವಾದ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಕುರಿತ ಫ್ಲೆಕ್ಸ್ ಸಂಘರ್ಷ ಇನ್ನೂ ಮುಂದುವರಿದಿದ್ದು, ರಾಜ್ಯದಲ್ಲಿ ಅಲ್ಲಲ್ಲಿ ಫ್ಲೆಕ್ಸ್ ಹಾಕುವುದು ತೆರವುಗೊಳಿಸುವುದು ನಡೆದಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದ ಪ್ರಯುಕ್ತ ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ನಲ್ಲಿ ಆ.13ರಂದು ವಿನಾಯಕ ದಾಮೋದರ ಸಾವರ್ಕರ್ ಅವರ ಫೋಟೋ ಹಾಕಿದ್ದಕ್ಕೆ ಎಸ್ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ತುಮಕೂರಿನ ಎಂಪ್ರೆಸ್ ಕಾಲೇಜು ಮುಂಭಾಗ ಹಾಕಲಾಗಿದ್ದ ಫ್ಲೆಕ್ಸ್ನಲ್ಲಿದ್ದ ವೀರ ಸಾವರ್ಕರ್ ಭಾವಚಿತ್ರವನ್ನು ಆ. 16ರಂದು ಕಿಡಿಗೇಡಿಗಳು ಹರಿದು ಹಾಕಿದ್ದರು. ಇದಕ್ಕೆ ಸೆಡ್ಡು ಹೊಡೆದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಆ. 17ರಂದು ತುಮಕೂರಿನ ಟೌನ್ಹಾಲ್ ಸರ್ಕಲ್ನಲ್ಲಿರುವ ಗಣಪತಿ ದೇವಸ್ಥಾನದ ಎದುರು ಸಾರ್ವಕರ್ ಫ್ಲೆಕ್ಸ್ ಅಳವಡಿಸಿದ್ದರು.
ಇದೀಗ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಸಾವರ್ಕರ್ ಫ್ಲೆಕ್ಸ್ ಸಂಘರ್ಷ ಮುಂದುವರಿದಿದೆ. ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಫಝಲ್ ಅಸೈಗೋಳಿ ಹೆಸರಿನಲ್ಲಿ ಇಲ್ಲಿನ ಉಳ್ಳಾಲ, ದೇರಳಕಟ್ಟೆಯಲ್ಲಿ ಸಾವರ್ಕರ್ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ಬ್ಯಾನರ್ ಹಾಕಲು ಕೊಣಾಜೆ, ಬೆಳ್ಮ ಗ್ರಾಮ ಪಂಚಾಯತ್ನಿಂದ ಫಜಲ್ ಅನುಮತಿ ಪಡೆದಿದ್ದು, ಸೆ.3ರ ವರೆಗೆ ಫ್ಲೆಕ್ಸ್ ಹಾಕುವುದಕ್ಕೆ ಸ್ಥಳೀಯಾಡಳಿತ ಅನುಮತಿಯನ್ನೂ ನೀಡಿತ್ತು. ಆದರೆ ಇದೀಗ ಸ್ಥಳೀಯಾಡಳಿತವೇ ಆ ಫ್ಲೆಕ್ಸ್ ತೆರವುಗೊಳಿಸಿದೆ.
ಸಾವರ್ಕರ್ ಭಾವಚಿತ್ರ ಹಾಕಿದ್ದಕ್ಕೆ ಎಸ್ಡಿಪಿಐ ಕಾರ್ಯಕರ್ತರ ಆಕ್ರೋಶ!