ಶಿವಮೊಗ್ಗ: ನಗರದ ಸವಳಂಗ ರಸ್ತೆಯ ನೂತನ ರೈಲ್ವೆ ಮೇಲ್ಸೇತುವೆ ಶುಕ್ರವಾರ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ರೈಲ್ವೆ ಸಚಿವರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಶೀಘ್ರವೇ ಸವಳಂಗ ರಸ್ತೆ, ಕಾಶಿಪುರ, ವಿದ್ಯಾನಗರ ರೈಲ್ವೆ ಮೇಲ್ಸೇತುವೆಗಳು ಅಧಿಕೃತವಾಗಿ ಉದ್ಘಾಟನೆಯಾಗಲಿವೆ.
ಶುಕ್ರವಾರ ಸಂಜೆ ರೈಲ್ವೆ ಮೇಲ್ಸೇತುವೆ ವೀಕ್ಷಣೆ ಮಾಡಿ ಮಾತನಾಡಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಇಂದಿನಿಂದ ಈ ಫೈಓವರ್ನಲ್ಲಿ ವಾಹನ ಸಂಚರಿಸಲಿವೆ. ಶೀಘ್ರದಲ್ಲೇ ನಗರದ ಎಲ್ಲ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ಸಂಬಂಧಪಟ್ಟ ಸಚಿವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಪ್ರಮುಖರಾದ ಮಾಲತೇಶ್, ಬಳ್ಳೇಕೆರೆ ಸಂತೋಷ್ ಮುಂತಾದವರಿದ್ದರು.
ಈಗಾಗಲೇ ನಗರದ ಎರಡು ಫ್ಲೈ ಓವರ್ಗಳು ಹಾಗೂ ಒಂದು ಅಂಡರ್ಪಾಸ್ ಎರಡೇ ವರ್ಷಗಳಲ್ಲಿ ಪೂರ್ಣಗೊಂಡಂತಾಗಿದೆ. ಇನ್ನು ಒಂದು ತಿಂಗಳಲ್ಲಿ ವಿದ್ಯಾನಗರ ರೈಲ್ವೆ ಮೇಲ್ಸೇತುವೆಯೂ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣವಾದ ಈ ಕಾಮಗಾರಿಗಳಿಂದ ರೈಲ್ವೆ ಕ್ರಾಸಿಂಗ್ನಲ್ಲಿ ಜನರು ಕಾಯುವುದು ತಪ್ಪಿದಂತಾಗಿದೆ. ದಿನವೊಂದಕ್ಕೆ 20ಕ್ಕೂ ಹೆಚ್ಚು ರೈಲುಗಳು ಶಿವಮೊಗ್ಗ ನಿಲ್ದಾಣದ ಮೂಲಕ ಸಂಚರಿಸುತ್ತವೆ. ಪ್ರತಿ ಬಾರಿ ರೈಲ್ವೆ ಕ್ರಾಸಿಂಗ್ ಬಂದ್ ಆದಾಗಲೂ ವಾಹನಗಳು ಕಿಮೀಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಾದ ಅನಿವಾರ್ಯತೆ ಇನ್ನು ಮುಂದೆ ಇರುವುದಿಲ್ಲ.
ಶಿವಮೊಗ್ಗದ ಸವಳಂಗ ರಸ್ತೆ, ಕಾಶೀಪುರ ಹಾಗೂ ಭದ್ರಾವತಿ ಹೊರ ವಲಯದ ಕಡದ ಕಟ್ಟೆಯಲ್ಲಿ ರೈಲ್ವೆ ಮೇಲ್ಸೇತುವೆಗಳಿಗೆ 88 ಕೋಟಿ ರೂ. ಮಂಜೂರಾಗಿತ್ತು. ಹೊಳೆಹೊನ್ನೂರು ರಸ್ತೆ ರೈಲ್ವೆ ಮೇಲ್ಸೇತುವೆಗೆ ಸಂಪೂರ್ಣವಾಗಿ 43.89 ಕೋಟಿ ರೂ. ಅನುದಾನವನ್ನೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಭರಿಸಿದೆ. ಉಳಿದ ಮೂರು ಮೇಲ್ಸೇತುವೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ ಶೇ.50ರಷ್ಟು ಅನುದಾನ ನೀಡಿವೆ.