ಸಾವಳಗಿ: ಸಮೀಪದ ತೊದಲಬಾಗಿ ಗ್ರಾಮದಲ್ಲಿ ಕರೊನಾ ಸೇನಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆ ಒಬ್ಬರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ತಹಸೀಲ್ದಾರ್ ಹಾಗೂ ಗ್ರಾಪಂ ಅಧಿಕಾರಿಗಳು ಗ್ರಾಮ ಚಾವಡಿ ಓಣಿಯನ್ನು ಸೀಲ್ಡೌನ್ ಮಾಡಿದರು.
ಸೇನಾನಿಯಾಗಿ ಕಳೆದ ಮೂರು ತಿಂಗಳಿನಿಂದ ಕೆಲಸ ನಿರ್ವಹಿಸುತ್ತಿದ್ದ ಅವರು ನೆಗಡಿ, ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದರು. ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕರೊನಾ ಲಕ್ಷಣ ಹಿನ್ನೆಲೆ ಜು.10 ರಂದು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಜು.15 ರಂದು ವರದಿಯಲ್ಲಿ ಪಾಸಿಟಿವ್ ದೃಢವಾಗಿದೆ.
ಅವರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವ 8 ಜನರನ್ನು ಹೋಮ್ ಕ್ವಾರೆಂಟೈನ್ನಲ್ಲಿರಲು ಸೂಚಿಸಿದ್ದು, ಎಲ್ಲರನ್ನು ಡಾ. ಪ್ರಕಾಶ ಹುಗ್ಗಿ ನೇತೃತ್ವದ ತಂಡ ಸ್ಕ್ರೀನಿಂಗ್ ಮಾಡಿ ತಪಾಸಣೆ ನಡೆಸಿತು. ಇನ್ನು ದ್ವೀತಿಯ ಸಂಪರ್ಕದಲ್ಲಿದ್ದ 50 ಜನರನ್ನು ಕೂಡ ತಪಾಸಣೆ ನಡೆಸಿದರು. ಕೆಮ್ಮು, ಜ್ವರ, ನೆಗಡಿ ಕಂಡುಬಂದರೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಬೇಕೆಂದು ಸೂಚಿಸಿದರು.
ತಹಸೀಲ್ದಾರ್ ಸಂಜಯ ಇಂಗಳೆ, ಉಪ ತಹಸೀಲ್ದಾರ್ ವೈ.ಎಚ್. ದ್ರಾಕ್ಷಿ, ಪಿಡಿಒ ನಂಜಯ್ಯನಮಠ, ವೈದ್ಯ ಡಾ.ಪ್ರಕಾಶ ಹುಗ್ಗಿ, ಲೆಕ್ಕಾಧಿಕಾರಿ ಎಸ್.ಎಂ.ಜಂಗಮಶೆಟ್ಟಿ ಇದ್ದರು.
ಆಶಾ ಕಾರ್ಯಕರ್ತೆ ಕಳೆದ ಒಂದು ತಿಂಗಳ ಹಿಂದೆ ವಿಜಯಪುರ ನಗರಕ್ಕೆ ಹೋಗಿದ್ದರು. ಕರೊನಾ ಪಾಸಿಟಿವ್ ದೃಢವಾಗಿರುವ ಯಾವ ವ್ಯಕ್ತಿಗಳ ಸಂಪರ್ಕವೂ ಇಲ್ಲ. ಸೋಂಕು ಹೇಗೆ ಬಂದಿದೆ ಎಂಬುದನ್ನು ತನಿಖೆ ಮಾಡುತ್ತಿದ್ದೇವೆ.
– ಡಾ.ಪ್ರಕಾಶ ಹುಗ್ಗಿ ವೈದ್ಯಾಧಿಕಾರಿಗಳು ಸಾವಳಗಿ