ಮಂಗಳೂರು: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ನಾಲ್ಕು ಕಡೆಗಳಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸಿಗ್ನಲ್ಗಳು ಪತ್ತೆಯಾಗಿದ್ದು, ರಾಜ್ಯ ಆಂತರಿಕ ಭದ್ರತಾ ವಿಭಾಗ(ಐಎಸ್ಡಿ) ಸ್ಥಳಕ್ಕೆ ತೆರಳಿ ತನಿಖೆ ಕೈಗೆತ್ತಿಕೊಂಡಿದೆ.
ಚಿಕ್ಕಮಗಳೂರಿನ ದಟ್ಟಾರಣ್ಯ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಶಿರಸಿ ನಡುವಿನ ದಟ್ಟಾರಣ್ಯ, ಮಂಗಳೂರು ನಗರದ ಹೊರ ವಲಯದ ನಾಟೆಕಲ್ ಮತ್ತು ಕುಳಾಯಿ ಬಳಿ ಮೇ 23ರಿಂದ 29ರ ನಡುವೆ ಸಿಗ್ನಲ್ ಪತ್ತೆಯಾಗಿರುವುದನ್ನು ಕೇಂದ್ರ ಗುಪ್ತಚರ ಇಲಾಖೆ ಪತ್ತೆ ಮಾಡಿದೆ.
ಕರಾವಳಿ ಹಾಗೂ ಮಲೆನಾಡಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ಸ್ಯಾಟಲೈಟ್ ಫೋನ್ ಸಿಗ್ನಲ್ ಪತ್ತೆಯಾಗಿ ಆತಂಕ ಮೂಡಿಸಿದೆ. ಈ ಹಿಂದೆ ಸಿಗ್ನಲ್ ಪತ್ತೆಯಾದ ಸಂದರ್ಭ ಗುಪ್ತಚರ ಇಲಾಖೆ ತನಿಖೆ ನಡೆಸಿತ್ತು. ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವವರು ಯಾರು ಎಂಬುದು ನಿಗೂಢವಾಗಿದೆ. ಆದರೂ ಈ ಕರೆಯ ಮೂಲ, ಯಾಕಾಗಿ ಕರೆ ಮಾಡುತ್ತಾರೆ, ಯಾರು ಕರೆ ಮಾಡುತ್ತಾರೆ ಎಂಬುದು ಇದುವರೆಗೆ ಪತ್ತೆಯಾಗಿಲ್ಲ. ಭಾರತದಲ್ಲಿ ತುರಾಯ ಸ್ಯಾಟಲೈಟ್ ಫೋನ್ ನಿಷೇಧವಿದೆ.