ಸಾಸ್ವೆಹಳ್ಳಿ: ಹೋಬಳಿಯ ಹಿರೇಬಾಸೂರು ಗ್ರಾಮದಲ್ಲಿ ಶನಿವಾರ ರಾತ್ರಿ ನಾಪತ್ತೆಯಾದ ಜಿ.ವಿ. ಶ್ವೇತಾ (32) ಎಂಬ ಮಹಿಳೆ ಮಂಗಳವಾರ ಬೆಳಗ್ಗೆ ಹೊನ್ನಾಳಿ ತಾಲೂಕು ಬೆನಕನಹಳ್ಳಿ ಗ್ರಾಮದ ಸಮೀಪ ತುಂಗಭದ್ರಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಹೊನ್ನಾಳಿ ತಾಲೂಕಿನ ಹಿರೇಬಾಸೂರು ಗ್ರಾಮದ ವೆಂಕಟೇಶ್ ಅವರೊಂದಿಗೆ ನ್ಯಾಮತಿ ತಾಲೂಕು ಕುಂಕುವ ಗ್ರಾಮದ ಶ್ವೇತಾಳ ಮದುವೆ ಕಳೆದ ಮೂರು ವರ್ಷಗಳ ಹಿಂದೆ ನಡೆದಿತ್ತು. ದಂಪತಿಗೆ ಎರಡು ವರ್ಷದ ಒಂದು ಮಗು ಕೂಡ ಇದೆ.
ಶನಿವಾರ ರಾತ್ರಿ ದಂಪತಿ ಮಧ್ಯೆ ವರದಕ್ಷಿಣೆ ಬಗ್ಗೆ ಕಲಹ ನಡೆದಿತ್ತು ಎನ್ನಲಾಗಿದ್ದು ಅಂದಿನಿಂದ ಶ್ವೇತಾ ನಾಪತ್ತೆಯಾಗಿದ್ದರು.
ಕಲಹದ ವೇಳೆ ವೆಂಕಟೇಶನ ಕುಟುಂಬಸ್ಥರು ಶ್ವೇತಾಳನ್ನು ಕೊಲೆ ಮಾಡಿ ನದಿಗೆ ಎಸೆದಿದ್ದಾರೆ ಎಂದು ಶ್ವೇತಾಳ ಸಹೋದರ ಪ್ರದೀಪ್ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಡಿವೈಎಸ್ಪಿ ಡಾ.ಸಂತೋಷ್ ನೇತೃತ್ವದಲ್ಲಿ ಹೊನ್ನಾಳಿ ಪೊಲೀಸ್ ಠಾಣೆ ಪಿಐ ಸಿದ್ದನಗೌಡ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.