ಸಾಸ್ವೆಹಳ್ಳಿ: ಸಾಸ್ವೆಹಳ್ಳಿ ಭಾಗದಲ್ಲಿ ಚಿರತೆ ಹಾವಳಿ ಬೆನ್ನಲ್ಲೇ ಈಗ ಮಂಗಗಳ ದಾಳಿಗೆ ಜನತೆ ತುತ್ತಾಗಿದ್ದಾರೆ. ಗುರ್ರ್…ಗುಟ್ಟುತ್ತ ಮಹಿಳೆಯರು, ಮಕ್ಕಳು, ರಸ್ತೆ ಹೋಕರ ಮೇಲೆರಗುತ್ತಿವೆ.
ಗ್ರಾಮದ ಹೊರ ವಲಯದ ಡಬ್ಬಲ್ ಗೇಟ್ ಬಳಿ ರಾಜ್ಯ ಹೆದ್ದಾರಿ 115ರಲ್ಲಿ ಒಡಾಡುವ ಜನರಿಗೆ ಮುಷ್ಯ, ಕೋತಿಗಳ ಉಪಟಳ ತೀವ್ರವಾಗಿದೆ. ಬೈಕ್, ಟ್ರಾೃಕ್ಟರ್ ಸವಾರರ ಬೆನ್ನಟ್ಟಿ ದಾಳಿ ಮಾಡುತ್ತಿವೆ.
ಹೊಲ-ಗದ್ದೆಗೆ ತೆರಳುವ ರೈತರು, ಕೃಷಿ ಕಾರ್ಮಿಕರನ್ನು ಕಚ್ಚಿ ಗಾಯಗೊಳಿಸುತ್ತಿದ್ದು, 15 ದಿನಗಳ ಹಿಂದಷ್ಟೇ ಸದಾಶಿವಪುರದ ರತ್ನಮ್ಮ ಹೊಲಕ್ಕೆ ಹೋಗುವಾಗ ಮುಷ್ಯ ಕಚ್ಚಿದೆ. ಅಲ್ಲದೇ, ಗ್ರಾಮದ ಮೆಹಬೂಬ್ ಅಲಿ ಎಂಬುವರಿಗೆ ಕಳೆದ ವಾರವಷ್ಟೇ ತೊಡೆ ಭಾಗದಲ್ಲಿ ಕಚ್ಚಿ ಗಾಯಗೊಳಿಸಿದೆ. ಪರಿಣಾಮ ಸಾರ್ವಜನಿಕರು ಈ ಹೆದ್ದಾರಿಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ.
ಸಾಸ್ವೆಹಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಮುಷ್ಯ ಮತ್ತು ಕೆಂಪು ಮಂಗಗಳ ಹಾವಳಿ ತೀವ್ರವಾಗಿದೆ. ನಿತ್ಯವೂ ಹಂಚಿನ ಮನೆಗಳ ಮೇಲೆ ದಾಂಗುಡಿಯಿಟ್ಟು, ಹಂಚುಗಳನ್ನು ಒಡೆದು ಹಾಕುತ್ತಿವೆ. ಮನೆ ಮೇಲೆ ಅಳವಡಿಸಿದ ಡಿಶ್ ಬುಟ್ಟಿಗಳನ್ನು ಮುರಿದು ಹಾಕುತ್ತಿವೆ. ಹಣ್ಣು, ತರಕಾರಿ ಗಿಡಗಳನ್ನು ಹಾಳು ಮಾಡುತ್ತಿದ್ದು, ಮಂಗಳಗಳ ಉಪಟಳದಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ.
ಚಿರತೆ ದಾಳಿಗೆ ಮುಕ್ತಿ ಸಿಕ್ಕಿತು ಎನ್ನುವಷ್ಟರಲ್ಲಿ ಮಂಗಗಳ ಹಾವಳಿ ಈ ಭಾಗದ ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ. ಜನರ ಮೇಲೆರಗಿ ಕಚ್ಚುತ್ತಿರುವುದರಿಂದ ಒಂದೆರೆಡು ಹುಚ್ಚು ಹಿಡಿದ ಮಂಗಗಳಿರಬಹುದೇ? ಎಂಬ ಆತಂಕ ಹುಟ್ಟಿಸಿದೆ.
ನದಿ ದಡದ ಪ್ರದೇಶದಲ್ಲಿ ನೀರು, ಚಳಿ-ಗಾಳಿ ತೀವ್ರವಾಗಿದ್ದರಿಂದ ಮಂಗಗಳು ಊರೊಳಕ್ಕೆ ನುಗ್ಗುತ್ತಿವೆ. ಮರ-ಗಿಡಗಳಲ್ಲಿ ಹಣ್ಣು-ಹಂಪಲು ಇಲ್ಲದಿರುವ ಕಾರಣ ಮನೆಗಳೊಳಗೆ ನುಗ್ಗಿ ಸಿಕ್ಕಿದ್ದನ್ನು ತಿನ್ನುವ ಜತೆಗೆ, ಕೈಗೆತ್ತಿಕೊಂಡು ಪರಾರಿಯಾಗುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯಂತೆ ಇವನ್ನೂ ಸೆರೆ ಹಿಡಿದು ಕಾಡಿಗೆ ಸ್ಥಳಾಂತರಿಸಬೇಕು ಎನ್ನುತ್ತಿದ್ದಾರೆ ಸ್ಥಳೀಯರು.
ಸಾಸ್ವೆಹಳ್ಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಉಪಟಳ ಕಂಡುಬರುತ್ತಿದೆ. ಚಿರತೆ, ಕರಡಿ ಸಹ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಸ್ಥಳೀಯ ಗ್ರಾಮಾಡಳಿತಗಳು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅವನ್ನು ಅರಣ್ಯಕ್ಕೆ ಅಟ್ಟಲು ಕಾರ್ಯಾಚರಣೆ ಕೈಗೊಳ್ಳಬೇಕು.
ಮೆಹಬೂಬ್ ಅಲಿ, ಸಾಸ್ವೆಹಳ್ಳಿ.
———-