More

    ಚಿತ್ರರಂಗದಲ್ಲಿ ಸಂಕ್ರಾಂತಿ; ಹಳೇ ಲಯದತ್ತ ಚಿತ್ರೋದ್ಯಮ..

    ಬೆಂಗಳೂರು: ಚಿತ್ರೀಕರಣ ಪ್ರಾರಂಭಿಸಬಹುದು ಎಂದು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟ ಈ ನಾಲ್ಕು ತಿಂಗಳುಗಳಲ್ಲಿ ಹಲವು ಚಿತ್ರಗಳು ಪ್ರಾರಂಭವಾಗಿ, ನಿರ್ವಣದ ಬೇರೆಬೇರೆ ಹಂತಗಳಲ್ಲಿವೆ. ಈಗ ಸಂಕ್ರಾಂತಿಯ ನಂತರ ಚಿತ್ರರಂಗದಲ್ಲಿ ಚಟುವಟಿಕೆಗಳು ಇನ್ನಷ್ಟು ಗರಿಗೆದರಿದ್ದು, ಒಂದರ ಹಿಂದೊಂದು ಚಿತ್ರಗಳು ಸೆಟ್ಟೇರುತ್ತಿವೆ.

    ಪ್ರಮುಖವಾಗಿ, ಅಭಿಷೇಕ್ ಅಂಬರೀಷ್ ಅಭಿನಯದ ಎರಡನೇ ಚಿತ್ರ ‘ಬ್ಯಾಡ್ ಮ್ಯಾನರ್ಸ್’ನ ಘೋಷಣೆ ಕಳೆದ ವರ್ಷ ಅಂಬರೀಷ್ ಹುಟ್ಟುಹಬ್ಬದ ಸಂದರ್ಭದಲ್ಲೇ ಆಗಿತ್ತು. ಶುಕ್ರವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಚಿತ್ರದ ಮುಹೂರ್ತವಾಗಿದೆ. ಈ ಸಂದರ್ಭದಲ್ಲಿ ನಟಿ ಮತ್ತು ಸಂಸದೆ ಸುಮಲತಾ ಅಂಬರೀಷ್ ಸೇರಿ ಹಲವರು ಭಾಗವಹಿಸಿದ್ದರು. ಆ ನಂತರ ಚಿತ್ರಕ್ಕಾಗಿ ಮಂಡ್ಯದಲ್ಲಿ ಹಾಕಲಾಗಿರುವ ವಿಶೇಷ ಸೆಟ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಿದ್ದು, ದರ್ಶನ್ ಸಹ ಸೆಟ್​ಗೆ ಭೇಟಿಕೊಟ್ಟು, ‘ದುನಿಯಾ’ ಸೂರಿ, ಅಭಿಷೇಕ್ ಮುಂತಾದವರಿಗೆ ಶುಭಕೋರಿ ಬಂದಿದ್ದಾರೆ. ಮೈಸೂರಿನಲ್ಲಿ ಅಂಬರೀಷ್ ಮಗನ ಚಿತ್ರದ ಚಿತ್ರೀಕರಣ ಪ್ರಾರಂಭವಾದರೆ, ಇತ್ತ ಬೆಂಗಳೂರಿನಲ್ಲಿ ಶಶಿಕುಮಾರ್ ಮಗ ಅಕ್ಷಿತ್ ಅವರ ಮೂರನೇ ಚಿತ್ರ ‘ಓ ಮೈ ಲವ್’ನ ಮುಹೂರ್ತವಾಗಿದೆ. ಸಚಿವ ಬಿ. ಶ್ರೀರಾಮುಲು ಆರಂಭ ಫಲಕ ತೋರಿದರೆ, ಶಶಿಕುಮಾರ್ ಕ್ಯಾಮರಾ ಚಾಲನೆ ಮಾಡಿದ್ದಾರೆ.

    ಇದಲ್ಲದೆ ವಿನೋದ್ ಪ್ರಭಾಕರ್ ಮತ್ತು ‘ಲೂಸ್ ಮಾದ’ ಯೋಗಿ ಅಭಿನಯದ ‘ಲಂಕಾಸುರ’ ಚಿತ್ರದ ಮುಹೂರ್ತ ದೊಡ್ಡಬಸ್ತಿಯ ಶ್ರೀ ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ನೆರವೇರಿದೆ. ಇದರ ಜತೆಗೆ ಸಂಚಾರಿ ವಿಜಯ್, ರಂಜಿನಿ ರಾಘವನ್ ಅಭಿನಯದ ‘ಅವಸ್ಥಾಂತರ’ ಚಿತ್ರ ಸಹ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳು ಸೆಟ್ಟೇರುವುದಕ್ಕೆ ಕ್ಯೂನಲ್ಲಿ ನಿಂತಿದ್ದು, ಹೊಸ ಉತ್ಸಾಹ ಮೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts